SHIVAMOGGA LIVE | 12 JUNE 2023
SHIMOGA : ತಾಂತ್ರಿಕ ಸಮಸ್ಯೆಯಿಂದ ಜನಶತಾಬ್ದಿ ರೈಲು (Jan Shatabdi Train) ಪುನಃ ಎರಡು ಗಂಟೆ ವಿಳಂಬವಾಗಿ ಶಿವಮೊಗ್ಗ ನಿಲ್ದಾಣ ತಲುಪಿದೆ. ಇನ್ನೊಂದೆಡೆ ಸೋಮವಾರ ರೈಲಿನಲ್ಲಿ ಮತ್ತೆ ತಾಂತ್ರಿಕ ದೋಷ ಉಂಟಾಗಿದೆ. ಇದರಿಂದ ರೈಲು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಪ್ರಯಾಣ ಆರಂಭಿಸಿದೆ.
ರಾತ್ರಿ 2 ಗಂಟೆ ಲೇಟ್
ಜನ ಶತಾಬ್ದಿ ರೈಲು ಭಾನುವಾರ ರಾತ್ರಿ ಎರಡು ಗಂಟೆ ತಡವಾಗಿ ಶಿವಮೊಗ್ಗ ತಲುಪಿದೆ. ಸಂಜೆ 5.15ಕ್ಕೆ ಬೆಂಗಳೂರಿನಿಂದ ಹೊರಟ ರೈಲು 9.40ಕ್ಕೆ ಶಿವಮೊಗ್ಗ ತಲುಪಬೇಕಿತ್ತು. ಆದರೆ ಇಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಮಧ್ಯರಾತ್ರಿ ನಿಲ್ದಾಣಕ್ಕೆ ಆಗಮಿಸಿದೆ. ಬೀರೂರು ನಿಲ್ದಾಣದಲ್ಲಿ ಇಂಜಿನ್ ಕೈಕೊಟ್ಟಿದ್ದರಿಂದ ಗಂಟೆಗಟ್ಟಲೆ ರೈಲು ನಿಲ್ಲಿಸಲಾಗಿತ್ತು.
ಎಲೆಕ್ಟ್ರಿಕ್ ಇಂಜಿನ್ನಲ್ಲಿ ದೋಷ
ಶಿವಮೊಗ್ಗ ರೈಲ್ವೆ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಇಂಜಿನ್ ಸಂಚಾರ ಆರಂಭಿಸಿದೆ. ಜನ ಶತಾಬ್ದಿ ರೈಲಿಗೆ (Jan Shatabdi Train) ಎಲೆಕ್ಟ್ರಿಕ್ ಇಂಜಿನ್ ಅಳವಡಿಸಲಾಗಿದೆ. ಇದೆ ಇಂಜಿನ್ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಭಾನುವಾರ ರೈಲು ತಡವಾಗಿ ಶಿವಮೊಗ್ಗಕ್ಕೆ ಆಗಮಿಸಿತ್ತು. ತಾಂತ್ರಿಕ ದೋಷದ ಮಾಹಿತಿ ಪಡೆದ ಹಲವು ಪ್ರಯಾಣಿಕರು ಬೀರೂರಿನಲ್ಲೆ ಬಸ್ಗಳ ಮೂಲಕ ಶಿವಮೊಗ್ಗ, ಭದ್ರಾವತಿ ತಲುಪಿದರು. ರೈಲಿನಲ್ಲೆ ಉಳಿದ ಪ್ರಯಾಣಿಕರು ನಡುರಾತ್ರಿ ಶಿವಮೊಗ್ಗಕ್ಕೆ ಬಂದು ತಮ್ಮೂರು, ಮನೆ ತಲುಪಲು ಪರದಾಡಿದರು.
ಬೆಳಗ್ಗೆ ಮತ್ತೆ ತಾಂತ್ರಿಕ ದೋಷ
ಜನ ಶತಾಬ್ದಿ ರೈಲಿನಲ್ಲಿ ಬೆಳಗ್ಗೆ ಪುನಃ ತಾಂತ್ರಿಕ ದೋಷ ಉಂಟಾಯಿತು. ರಾತ್ರಿ ರೈಲು ಶಿವಮೊಗ್ಗಕ್ಕೆ ಬರುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ರಿಪೇರಿ ಕಾರ್ಯ ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬೇರೆಡೆಯಿಂದ ಡಿಸೇಲ್ ಇಂಜಿನ್ ತರಿಸಿಕೊಂಡಿದ್ದರು. ಆದರೆ ಡಿಸೇಲ್ ಇಂಜಿನ್ನಲ್ಲಿಯು ದೋಷ ಕಾಣಿಸಿಕೊಂಡಿದ್ದರಿಂದ ಅರ್ಧ ಗಂಟೆಗು ಹೆಚ್ಚು ಕಾಲ ತಡವಾಗಿ ಪ್ರಾಯಣ ಆರಂಭಿಸಿತು.
ಇದನ್ನೂ ಓದಿ – ಜನ ಶತಾಬ್ದಿ ರೈಲು 3 ಗಂಟೆ ಲೇಟ್, ರಾತ್ರಿ ಬದಲು ಮಧ್ಯರಾತ್ರಿ ಶಿವಮೊಗ್ಗ ತಲುಪಿದ ಟ್ರೈನ್, ಪ್ರಯಾಣಿಕರು ಹೈರಾಣು
ಏನು ಸಮಸ್ಯೆಯಾಗಿತ್ತು?
ಜನ ಶತಾಬ್ದಿ ರೈಲಿನ ಇಂಜಿನ್ನಿಂದ ಬ್ರೇಕ್ ಏರ್ ಎಲ್ಲಾ ಬೋಗಿಗು ತಲುಪದೆ ಸಮಸ್ಯೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಹಾಗಾಗಿ ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲು 5.50ಕ್ಕೆ ನಿಲ್ದಾಣದಿಂದ ತೆರಳಿತು. ಬೇಗ ಬೆಂಗಳೂರು ತಲುಪಿ ಕಚೇರಿಗಳಿಗೆ ತೆರಳಬೇಕಿದ್ದರು ಗೊಂದಲಕ್ಕೀಡಾಗಿದ್ದರು.
ಜನ ಶತಾಬ್ದಿ ರೈಲಿನಲ್ಲಿ ಆಗಾಗ ತಾಂತ್ರಿಕ ದೋಷ ಕಾಣಿಸಿಕೊಂಡು, ಸಂಚಾರ ವಿಳಂಬವಾಗುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರೈಲ್ವೆ ಇಲಾಖೆ ಈ ಸಮಸ್ಯೆ ಪರಿಹರಿಸಿ, ಪ್ರಯಾಣಿಕರು ನಿಶ್ಚಿಂತೆಯಿಂದ ರೈಲು ಪ್ರಯಾಣ ಮಾಡುವಂತೆ ನೋಡಿಕೊಳ್ಳಬೇಕಿದೆ.