ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ಶಿವಮೊಗ್ಗದಿಂದ ಯಶವಂತಪುರದವರೆಗೆ ಸಂಚರಿಸುತ್ತಿದ್ದ ಜನಶತಾಬ್ದಿ ರೈಲು ಇನ್ಮುಂದೆ ಮೆಜಸ್ಟಿಕ್ನ ಕೇಂದ್ರ ರೈಲ್ವೆ ನಿಲ್ದಾಣದವರೆಗೆ ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಹದಿನೈದು ನಿಮಿಷ ಮೊದಲು ಹೊರಡತ್ತೆ
ಜನ ಶತಾಬ್ದಿ ರೈಲು ಜನವರಿ 31ರಿಂದ ಯಶವಂತಪುರ ಬದಲಾಗಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೆ ತಲುಪಲಿದೆ.
ಪ್ರತಿದಿನ ಬಳೆಗ್ಗೆ 5.30ಕ್ಕೆ ಹೊರಡುತ್ತಿದ್ದ ರೈಲು ಇನ್ಮುಂದೆ ಹದಿನೈದು ನಿಮಿಷ ಮೊದಲು ಪ್ರಯಾಣ ಆರಂಭಿಸಲಿದೆ.
ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ
ರಾತ್ರಿ ಪ್ರಯಾಣ ಆರಂಭಿಸುತ್ತಿದ್ದ ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ರೈಲು ಪ್ರತಿ ದಿನ ಬೆಳಗ್ಗೆ 3.50ಕ್ಕೆ ಮೆಜಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿತ್ತು.
ಇನ್ಮುಂದೆ ಈ ರೈಲು 5 ಗಂಟೆಗೆ ಬೆಂಗಳೂರು ತಲುಪುವಂತೆ ಸಮಯ ನಿಗದಿಪಡಿಸಲಾಗುತ್ತದೆ. ಇದರಿಂದ ಬೆಂಗಳೂರಿನಲ್ಲಿ ಬಸ್ಸು, ಆಟೋ, ಮೆಟ್ರೋ ರೈಲು ಮೂಲಕ ಜನರು ಸುಲಭವಾಗಿ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಹೋಗಲು ಅನುಕೂಲವಾಗಲಿದೆ.
ಪ್ಲಾಟ್ಫಾರಂ ವಿಸ್ತರಣೆಗೆ ನಿರ್ಧಾರ
ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಪ್ಲಾಟ್ಫಾರಂ ವಿಸ್ತರಣೆಗೆ ನಿರ್ಧರಿಸಲಾಗಿದೆ. ಜೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ, ಅನುಕೂಲವಾಗಲಿದೆ. ರೈಲ್ವೆ ಇಲಾಖೆಗೆ ಸೇರಿದ ಜಾಗವಿದೆ. ಹಾಗಾಗಿ ಹೆಚ್ಚುವರಿಯಾಗಿ ಲೈನ್ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಅರಸಾಳು ನಿಲ್ದಾಣದಲ್ಲಿ ಎಲ್ಲಾ ರೈಲು ನಿಲ್ತವೆ
ಅರಸಾಳು ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲಗುಡೆಗೆ ರೈಲ್ವೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದೆ ಇಲ್ಲಿ ಎಕ್ಸ್ಪ್ರೆಸ್ ರೈಲುಗಳು ಕೂಡ ಸ್ಟಾಪ್ ಕೊಡಲಿವೆ. ಇದರಿಂದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಮಾಲ್ಗುಡಿ ಮ್ಯೂಸಿಯಂ ನೋಡಲು ಜನರಿಗೆ ಉತ್ತೇಜನ ಸಿಕ್ಕಂತೆ ಆಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸಭೆಯಲ್ಲಿ ಮತ್ತೇನೇನು ಚರ್ಚಿಸಲಾಯ್ತು?
ಶಿವಮೊಗ್ಗದಿಂದ ತಿರುಪತಿಗೆ ಸಂಚರಿಸುತ್ತಿದ್ದ ರೈಲು ರೇಣಿಗುಂಟಾದವರೆಗೆ ಸಂಚರಿಸುತ್ತಿತ್ತು. ಇದನ್ನು ಚೆನ್ನೈವರೆಗೆ ಸಂಚರಿಸುವಂತೆ ಮಾಡಬೇಕು ಎಂದು ಚರ್ಚಿಸಲಾಯಿತು.
ತಾಳಗುಪ್ಪ – ಸಿದ್ದಾಪುರ – ಶಿರಸಿ – ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಸಂಬಂಧ ಸಮೀಕ್ಷೆ ಕಾರ್ಯ ಆರಂಭಿಸುವಂತೆ ಸಂಸದ ರಾಘವೇಂದ್ರ ಸೂಚನೆ. 50 ಲಕ್ಷ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ನಡೆಸಿ, ಆರು ತಿಂಗಳಲ್ಲಿ ವರದಿ ನೀಡಬೇಕು.
ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್, ಡೆಪ್ಯೂಟಿ ರೈಲ್ವೆ ಜನರಲ್ ಮ್ಯಾನೇಜರ್ ರಾಹುಲ್ ಅಗರ್ವಾಲ್, ಡೆಪ್ಯೂಟಿ ಮ್ಯಾನೇಜರ್ ವಿದ್ಯಾ, ಹಿರಿಯ ಅಧಿಕಾರಿಗಳಾದ ಡಾ.ಸತೀಶ್ ವರ್ಮಾ, ರವಿಕುಮಾರ್, ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಸೇರಿದಂತೆ ಇತರರು ಇದ್ದರು.
ಎರಡು ವರ್ಷದ ಮನೆ ಮಾರಾಟಕ್ಕಿದೆ. GROUND FLOOR 2BHK, 1st FLOOR 1 BHK (ಎರಡು ಮನೆಗಳು), 2nd FLOOR BACHELOR ROOM WITH ATTACHED BATHROOM. ವಿಳಾಸ : ತರಳಬಾಳು ಲೇಔಟ್ ಪಕ್ಕ, ತಾವರೆಚಟ್ನಹಳ್ಳಿ, ಪೇಸ್ ಕಾಲೇಜು ಹತ್ತಿರ. ಹೊನ್ನಾಳಿ ರಸ್ತೆ, ಶಿವಮೊಗ್ಗ. ಹೆಚ್ಚಿನ ಮಾಹಿತಿಗೆ : 9972194422 ಜಾಹೀರಾತು
ಶಿವಮೊಗ್ಗದಲ್ಲಿ ಮನೆ ಮಾರಾಟಕ್ಕಿದೆ