SHIVAMOGGA LIVE NEWS | MINISTER| 06 ಮೇ 2022
ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಇವತ್ತಿನಿಂದ ಐದು ದಿನ ಪಾದಯಾತ್ರೆ ನಡೆಸಲಾಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರೂರು ಗುಡ್ಡೆಕೊಪ್ಪದಿಂದ ಪಾದಯಾತ್ರೆ ಆರಂಭಿಸಲಾಗಿದೆ. ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಪಾದಯಾತ್ರೆಯಲ್ಲಿದ್ದವರ ಮೇಲೆಯೇ ಕಿಮ್ಮನೆ ರತ್ನಾಕರ್ ಅವರು ಸಿಡಿಮಿಡಿಗೊಂಡರು.
ಸಿಟ್ಟಾಗಲು ಕಾರಣವೇನು?
ಪಾದಯಾತ್ರೆಗೆ ಚಾಲನೆ ನೀಡಿದ ಸ್ಥಳದಿಂದ ಕೊಂಚ ದೂರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ಇದೆ. ಮನೆ ಮುಂದೆ ಯಾರೂ ಘೋಷಣೆ ಕೂಗುವಂತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಈ ಮೊದಲೆ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದರು.
ಇವತ್ತು ಪಾದಯಾತ್ರೆ ತೆರಳುವ ಸಂದರ್ಭ ಡ್ರಮ್ ಬಾರಿಸುವವರು ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಡ್ರಮ್ ಸೆಟ್ ಬಾರಿಸಿದರು. ಇದರಿಂದ ಕಿಮ್ಮನೆ ರತ್ನಾಕರ್ ಅವರು ಗರಂ ಆದರು. ಹಾಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ದಾಟುವವರೆಗೆ ಕಾರ್ಯಕರ್ತರು ಮೌನವಾಗಿ ಪಾದಯಾತ್ರೆ ಮಾಡಿದರು.
ಗೃಹ ಸಚಿವರ ಮನೆ ಮುಂದೆ ಅವರ ವಿರುದ್ಧ ಘೋಷಣೆ ಕೂಗಿದರೆ ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ, ಮುಜುಗರ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಅವರ ಮನೆ ಬಳಿ ಘೋಷಣೆ ಕೂಗುವಂತಿಲ್ಲ ಎಂದು ಕಿಮ್ಮನೆ ರತ್ನಾಕರ್ ಅವರು ತಿಳಿಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿಯು ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ, ಏನಿದರ ಉದ್ದೇಶ? ಹೇಗಿದೆ ಜನಸ್ಪಂದನೆ?