SHIVAMOGGA LIVE NEWS | HEALTH | 24 ಮೇ 2022
ಕೋವಿಡ್ ಸಂದರ್ಭ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 25ರಂದು ಮಧ್ಯಾಹ್ನ 2 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸರ್ಜಿ ಆಸ್ಪತ್ರೆ ನಿರ್ದೇಶಕ ಡಾ. ಧನಂಜಯ ಸರ್ಜಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಧನಂಜಯ ಸರ್ಜಿ ಅವರು, ಕೋವಿಡ್ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಧೈರ್ಯ ತುಂಬಿ, ತಮ್ಮ ಜೀವದ ಹಂಗು ತೊರೆದು ಕರ್ತವ್ಯವನ್ನು ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದುದು. ಇವರ ಸೇವೆಯನ್ನು ಮನಗಂಡು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಹಕಾರದಲ್ಲಿ ಸರ್ಜಿ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸುವುದರ ಜೊತೆಗೆ ಅವರಿಗೆ ಸರ್ಜಿ ಆರೋಗ್ಯ ಕಾರ್ಡ್ ಹಾಗೂ ಕಿಟ್ ವಿತರಿಸಲಾಗುವುದು ಎಂದರು.
ಸರ್ಜಿ ಆರೋಗ್ಯ ಕಾರ್ಡ್, ಕಿಟ್
ಸರ್ಜಿ ಆರೋಗ್ಯ ಕಾರ್ಡ್ಗೆ 500 ರೂ. ಶುಲ್ಕ ವಿಧಿಸಲಾಗಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಇದನ್ನು ಉಚಿತವಾಗಿ ನೀಡಲಾಗುವುದು. ಈ ಕಾರ್ಡ್ನಿಂದ ಸಲಹಾ ಶುಲ್ಕವಿರುವುದಿಲ್ಲ. ಔಷಧಿಯಲ್ಲಿ ಶೇ.20ರಷ್ಟು ರಿಯಾಯಿತಿ ಇರುತ್ತದೆ. ಪ್ರಯೋಗ ಶಾಲೆಗಳಲ್ಲಿ ಶೇ. 40ರಷ್ಟು ರಿಯಾಯಿತಿ ಇದ್ದು, ಅಡ್ಮಿಟ್ ಆದರೆ ಶೇ.20ರಷ್ಟು ರಿಯಾಯಿತಿ ಇರುತ್ತದೆ. ಅಲ್ಲದೆ, ಮಹಿಳೆಯರ ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್ಗಳ ತಪಾಸಣೆಯೂ ಕೂಡ ಉಚಿತವಾಗಿರುತ್ತದೆ ಎಂದು ಡಾ. ಧನಂಜಯ ಸರ್ಜಿ ತಿಳಿಸಿದರು.
ಆರೋಗ್ಯ ಕಿಟ್ನಲ್ಲಿ ಕೊಡೆ, ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್, ಸೋಪ್ ಸೇರಿದಂತೆ ವಿವಿಧ ಉಪಕರಣಗಳು ಇರುತ್ತವೆ. ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಈ ಸೌಲಭ್ಯವನ್ನು ನೀಡಲಾಗುವುದು ಎಂದು ಡಾ. ಧಜಂಜಯ ಸರ್ಜಿ ತಿಳಿಸಿದರು.
ಚೈತನ್ಯ ಫೌಂಡೇಷನ್ನ ಸಿಇಓ ಬಿ.ಟಿ. ಭದ್ರೀಶ್, ಸರ್ಜಿ ಆಸ್ಪತ್ರೆಗಳ ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ್, ರಾಘವೇಂದ್ರ ಪ್ರಸಾದ್ ಇದ್ದರು.
ಇದನ್ನೂ ಓದಿ – ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗುತ್ತೆ?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.