SHIVAMOGGA LIVE NEWS | 3 APRIL 2024
SHIKARIPURA : ಅಡಿಕೆ ತೋಟದ ಕೊಳವೆ ಬಾವಿಯಲ್ಲಿ ನೀರು ಕುಡಿಯಲು ಬರುತ್ತಿದ್ದ ಮೂರವರೆ ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಶಿಕಾರಿಪುರ ಪಟ್ಟಣದ ಸಮೀಪದ ಮದಗ ಹಾರನಹಳ್ಳಿಯಲ್ಲಿ ಚಿರತೆ ಸೆರೆಯಾಗಿದೆ.
ಗ್ರಾಮದ ಸಮೀಪದ ಗುಡ್ಡವನ್ನು ಒಳಗೊಂಡಿರುವ ಚಂದ್ರಕಲಾ ಅರಣ್ಯಪ್ರದೇಶದಲ್ಲಿ ಚಿರತೆಗಳು ಇದ್ದು, ಕಾಡಿನಲ್ಲಿ ನೀರು, ಆಹಾರಕ್ಕೆ ಕೊರತೆ ಆಗಿರುವುದರಿಂದ ನಾಡಿನತ್ತ ಬರುತ್ತಿವೆ ಎನ್ನಲಾಗಿದೆ. ಈ ಚಿರತೆ ಸ್ಥಳೀಯವಾಗಿ ನಾಯಿ ಹೊತ್ತೊಯ್ದಿರುವ ಬಗ್ಗೆಯೂ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಚಿರತೆಯ ಓಡಾಟ ಸ್ಥಳೀಯವಾಗಿ ಆತಂಕ ಸೃಷ್ಟಿಸಿತ್ತು.
ತೋಟಕ್ಕೆ ಕೊಳವೆಬಾವಿಯಿಂದ ನೀರು ಹಾಯಿಸುತ್ತಿದ್ದ ಕಾರಣ ಬಾಯಾರಿಕೆ ನೀಗಿಸಿಕೊಳ್ಳಲು ಚಿರತೆ ಬರುತ್ತಿದೆ ಎಂಬ ಮಾಹಿತಿ ಅರಿತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಚ್ 29ರಂದು ಬೋನು ಇಟ್ಟು ಕಾದು ಕುಳಿತಿದ್ದರು. ಅದು ಏಪ್ರಿಲ್ 1ರಂದು ಬೋನಿಗೆ ಬಿದ್ದಿದೆ. ಶಿಕಾರಿಪುರ ವಲಯ ಅರಣ್ಯಾಧಿಕಾರಿ ಆರ್.ಬಿ.ಹಿರೇಮಠ ನೇತೃತ್ವದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ – ಏ.26, ಮೇ 7ರಂದು ರಾಜ್ಯದಲ್ಲಿ ಎಲ್ಲ ಶಾಲೆ, ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ