ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಡಿಸೆಂಬರ್ 2021
ಕ್ಷುಲಕ ವಿಚಾರಕ್ಕೆ ಜಗಳವಾಡಿ, ಚಾಕು ಚುಚ್ಚಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಶಿವಮೊಗ್ಗ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.
ಸೈಯದ್ ಜಾಫರ್ ಮುಲ್ಲಾ (26) ಎಂಬಾತನನ್ನು ಜಾವಿದ್ ಬೇಗ್ (20) ಎಂಬಾತ ಹತ್ಯೆಗೈದಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಬ್ಬಿನ ಹಾಲು, ಪಾರ್ಕಿಂಗ್, ಜಗಳ
ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಜಯ ಕರ್ನಾಟಕ ರೈಸ್ ಮಿಲ್ ಮುಂಭಾಗ ಸೈಯದ್ ಜಾಫರ್ ಮುಲ್ಲಾ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡಿದ್ದ. ಜೂಸ್ ಕುಡಿಯಲು ಬರುವವರು ಕುಷನ್ ಅಂಗಡಿಯೊಂದರ ಮುಂದೆ ಬೈಕ್ ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ಕುಷನ್ ಅಂಗಡಿ ವ್ಯಾಪಾರಕ್ಕೆ ತೊಂದರೆ ಉಂಟಾಗುತ್ತಿತ್ತು.
ವ್ಯಾಪಾರಕ್ಕೆ ಅಡ್ಡಿಯಾಗುತ್ತಿದ್ದರಿಂದ ಕುಷನ್ ಅಂಗಡಿ ಮಾಲೀಕ ಜಾವಿದ್ ಬೇಗ್, ಕಬ್ಬಿನ ಹಾಲು ಅಂಗಡಿಯ ಜಾಫರ್ ಮುಲ್ಲಾ ಜೊತೆಗೆ ಹಲವು ಭಾರಿ ಜಗಳವಾಡಿದ್ದ. ಕಬ್ಬಿನ ಹಾಲು ಅಂಗಡಿಯನ್ನು ತೆರೆವು ಮಾಡುವಂತೆ ಒತ್ತಾಯಿಸಿದ್ದ. 2019ರ ನವೆಂಬರ್ 6ರಂದು ಜಾವಿದ್ ಬೇಗ್, ಸೈಯದ್ ಜಾಫರ್ ಮುಲ್ಲಾ ಜೊತೆಗೆ ಇದೆ ವಿಚಾರವಾಗಿ ಜಗಳವಾಡುತ್ತಿದ್ದ. ಆಗ ತನ್ನ ಕೈಯ್ಯಲ್ಲಿದ್ದ ಚಾಕುವಿನಿಂದ ಜಾವಿದ್ ಬೇಗ್’ಗೆ ಇರಿದು ಕೊಲೆಗೈದಿದ್ದಾನೆ.
ನ್ಯಾಯಾಲಯಕ್ಕೆ ಪ್ರಕರಣ
ಆರೋಪಿ ಶಿಕಾರಿಪುರದ ಉಡುಗಣಿಯ ಜಾವಿದ್ ಬೇಗ್’ನನ್ನು ಶಿಕಾರಿಪುರ ಸಿಪಿಐ ಬಸವರಾಜ ಅವರು ಬಂಧಿಸಿದ್ದರು. ವಿಚಾರಣೆ ನಡೆಸಿ ಜಾವಿದ್ ಬೇಗ್ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಾವಿದ್ ಬೇಗ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ, ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಜಾವಿದ್’ಗೆ ಜೀವಾವಧಿ ಶಿಕ್ಷೆ, ದಂಡ
ಹತ್ಯೆ ಮಾಡಿದ ಜಾವಿದ್ ಬೇಗ್’ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. 50 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಒಂದು ವೇಳೆ ದಂಡ ಕಟ್ಟದಿದ್ದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ದಂಡದ ಮೊತ್ತದಲ್ಲಿ 45 ಸಾವಿರ ರೂ. ಹಣವನ್ನು ಸೈಯದ್ ಜಾಫರ್ ಮುಲ್ಲಾನ ಅವಲಂಬಿತರಿಗೆ ಪರಿಹಾರವಾಗಿ ಕೊಡಲು ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಅವರು ವಾದ ಮಂಡಿಸಿದ್ದರು.