ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022
ಸಾಲ ಹಿಂತಿರುಗಿಸುವಂತೆ ಕೇಳಿದ ಸ್ನೇಹಿತನನ್ನು ಹತ್ಯೆ ಮಾಡಿ, ಮೃತದೇಹವನ್ನು ಮೂಟೆ ಕಟ್ಟಿ ಹೂತು ಹಾಕಿದ್ದ ಪ್ರಕರಣ ಸಂಬಂಧ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ. 2.50 ಲಕ್ಷ ರೂ. ದಂಡ ಕಟ್ಟುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಕಲ್ಲಹಳ್ಳಿಯ ಶ್ರೀಧರ (36) ಶಿಕ್ಷೆಗೆ ಒಳಗಾದವನು. ಶಿವಮೊಗ್ಗ ಗ್ಯಾರೇಜ್ ರಸ್ತೆಯ ಮಂಜಪ್ಪ (43) ಎಂಬಾತನನ್ನು ಹತ್ಯೆ ಮಾಡಲಾಗಿತ್ತು.
ಏನಿದು ಪ್ರಕರಣ?
ಶ್ರೀಧರ ಮತ್ತು ಮಂಜಪ್ಪ ಸ್ನೇಹಿತರಾಗಿದ್ದರು. ಮಂಜಪ್ಪನು ಶ್ರೀಧರನಿಗೆ 9 ಲಕ್ಷ ರೂ. ಸಾಲ ನೀಡಿದ್ದರು. ಆ ಹಣವನ್ನು ಹಿಂತಿರುಗಿಸುವಂತೆ ಪದೇ ಪದೆ ವಿನಂತಿಸಿಕೊಂಡಿದ್ದರು.
2014ರ ಫೆಬ್ರವರಿ 16ರಂದು ಮಂಜಪ್ಪನನ್ನು ಶಿವಮೊಗ್ಗ ಎಪಿಎಂಸಿ ಬಳಿಗೆ ಬರುವಂತೆ ಕರೆಯಿಸಿಕೊಂಡ ಶ್ರೀಧರ, ಚಾಕು ಚುಚ್ಚಿ ಹತ್ಯೆ ಮಾಡಿದ್ದ. ಮೃತದೇಹವನ್ನು ಚೀಲದಲ್ಲಿ ಕಟ್ಟಿ ಅಲ್ಲೇ ಹೂತು ಹಾಕಿದ್ದ.
ಘಟನೆ ಸಂಬಂಧ ಪ್ರಕರಣ ದಾಖಲಾಗಿ, ಕೋಟೆ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಜಯರಾಜ್ ಮತ್ತು ದೊಡ್ಡಪೇಟೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಎಸ್.ಎಂ.ಶಿವಕುಮಾರ್ ಅವರ ನೇತೃತ್ವದ ತಂಡ ತನಿಖೆ ನಡೆಸಿ ಶ್ರೀಧರನನ್ನು ಬಂಧಿಸಿದ್ದರು.
ಈ ಕುರಿತು ಶಿವಮೊಗ್ಗದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿ ಶ್ರೀಧರನಿಗೆ ಜೀವಾವಧಿ ಶಿಕ್ಷೆ ಮತ್ತು 2.50 ಲಕ್ಷ ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಜಿ.ಮಧು ಅವರು ವಾದಿಸಿದ್ದರು.