SHIVAMOGGA LIVE NEWS | 6 JANUARY 2024
SHIMOGA : ಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸ. ಆದರೂ ಪತ್ರಿಕೆಗಳು ಸತ್ಯದ ಪರವಾಗಿ ಪ್ರಭಾವ ಬೀರಬೇಕು. ಪತ್ರಿಕೆಯೊಂದನ್ನು ನಡೆಸಿದ ಅನುಭವ ತಮಗೂ ಇದೆ ಎಂದು ಸಚಿವ ಮಧು ಬಂಗಾರಪ್ಪ ತಮ್ಮ ಪತ್ರಿಕೋದ್ಯಮ ಅನುಭವ ಹಂಚಿಕೊಂಡರು.
ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಲೆನಾಡು ಮಿತ್ರ ಪತ್ರಿಕೆಯ ಮರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ತಾವು ಪತ್ರಿಕೆ ನಡೆಸಿದ ಬಗೆಯನ್ನು ವಿವರಿಸಿದರು.
ಮಿನಿಸ್ಟರ್ ಹೇಳಿದ 3 ಪ್ರಮುಖಾಂಶ
ಪತ್ರಿಕೆಗಳು ಅತ್ಯಂತ ಪ್ರಭಾವಶಾಲಿ. ಈ ಪ್ರಭಾವ ಸತ್ಯದ ಪರವಾಗಿ ಇರಬೇಕು. ಜನಪ್ರತಿನಿಧಿಯಾದ ಮೇಲೆ ಮಾಧ್ಯಮಗಳಿಂದ ಅನೇಕ ಸಂಗತಿ ಕಲಿತಿದ್ದೇನೆ. ಒಮ್ಮೆ ಸೋಲಾದಾಗ ಪುನಃ ಗೆಲ್ಲುವುದು ಹೇಗೆ ಅನ್ನುವುದನ್ನು ಕಲಿಸಿದ್ದು ಮಾಧ್ಯಮದವರು.
ಈ ಹಿಂದೆ ಸ್ಟಾರ್ ಎಂಬ ಪತ್ರಿಕೆಯನ್ನು ನಾನು ನಡೆಸಿದ್ದೆ. ಸರಸ್ವತಿ ಜಾಗಿರ್ದಾರ್ ಎಂಬುವವರಿಂದ ಪತ್ರಿಕೆ ಕೊಂಡುಕೊಂಡಿದ್ದೆ. 15 ದಿನಕ್ಕೊಮ್ಮೆ ಪ್ರಕಟವಾಗುತ್ತಿದ್ದ ಪತ್ರಿಕೆ 15 ಸಾವಿರ ಪ್ರತಿಗಳು ಮುದ್ರಣವಾಗುತ್ತಿತ್ತು. ನಾನು ಖರೀದಿಸಿದ ಮೇಲೆ ಅದರ ಮುದ್ರಣ ಸಂಖ್ಯೆ 1.15 ಲಕ್ಷಕ್ಕೆ ಏರಿಕೆಯಾಯಿತು. ಕೋಟ್ಯಂತರ ರೂ. ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದ ನಿರ್ಮಾಪಕರು ಜಾಹೀರಾತು ಪ್ರಕಟಿಸಿ ಹಣ ನೀಡುತ್ತಿರಲಿಲ್ಲ. ಕೊನೆಗೆ ಸ್ಟಾರ್ ಪತ್ರಿಕೆಯನ್ನು ಮುಚ್ಚಬೇಕಾಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಎರಡು ದಿನ ರೈತರಿಗೆ ತರಬೇತಿ, ಏನೆಲ್ಲ ತರಬೇತಿ ನೀಡಲಾಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಇರುವ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಕಟ್ಟಡ ಬ್ರಿಟೀಷರದ್ದು. ಅಲ್ಲಿ ಮನರಂಜನೆಗಾಗಿ ಬ್ರಿಟೀಷರು ಬರುತ್ತಿದ್ದರು. ಒಮ್ಮೆ ಗುರುಸ್ವಾಮಿ ಅವರು ಕಟ್ಟಡದ ಬಳಿ ಹೋಗಿ ಕಿಟಕಿಯಿಂದ ಬ್ರಿಟೀಷರನ್ನು ಕದ್ದು ನೋಡುತ್ತಿದ್ದರು. ಇದನ್ನು ಗಮನಿಸಿದ ಸೆಕ್ಯೂರಿಟಿ ಅವರನ್ನು ಓಡಿಸಿದ್ದನಂತೆ. ಆಗ ಒಂದಲ್ಲ ಒಂದು ದಿನ ಈ ಕಟ್ಟಡ ಕೊಂಡುಕೊಳ್ಳುತ್ತೇನೆ ಎಂದು ಗುರುಸ್ವಾಮಿ ಅವರು ಸವಾಲು ಹಾಕಿದ್ದರು. ಅದರಂತೆ ಆ ಕಟ್ಟಡ ಕೊಂಡುಕಂಡು ಕನ್ನಡದ ಪತ್ರಿಕೆ ಆರಂಭಿಸಿದರು. 25 ವರ್ಷ ಕಷ್ಟಪಟ್ಟ ಮೇಲೆ ಪತ್ರಿಕೆ ಲಾಭ ಮಾಡಲು ಆರಂಭವಾಯಿತು.