SHIVAMOGGA LIVE NEWS | 9 FEBRUARY 2024
SHIMOGA : ಕೆಮಿಕಲ್ನಲ್ಲಿ ಪೇಪರ್ ಅದ್ದಿ 500 ರೂ. ನೋಟು ಬರುವಂತೆ ಮಾಡಿ, ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 31.30 ಲಕ್ಷ ರೂ. ವಂಚಿಸಲಾಗಿದೆ. ಹೊಸದುರ್ಗದ ಮಲ್ಲಿಕಾರ್ಜುನ ಎಂಬುವವರು ವಂಚನೆಗೊಳಗಾಗಿದ್ದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮಿಕಲ್ನಲ್ಲಿ ಪೇಪರ್ ಅದ್ದಿ 500 ರೂ. ನೋಟ್
ಮಲ್ಲಿಕಾರ್ಜುನ ಅವರು ಕಾರು ರಿಪೇರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ರಶೀದ್ ಎಂಬಾತನ ಪರಿಚಯವಾಗಿತ್ತು. ಆತ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿದ್ದ. ಟಿಪ್ಪು ನಗರದ ಮನೆಯೊಂದಕ್ಕೆ ಮಲ್ಲಿಕಾರ್ಜುನ ತೆರಳಿದ್ದರು. ಅಲ್ಲಿ ಕೆಮಿಕಲ್ನಲ್ಲಿ ಪೇಪರ್ ಅದ್ದಿ 500 ರೂ. ನೋಟು ಬರುವಂತೆ ಮಾಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಲಕ್ಷ ಲಕ್ಷ ಹಣ ಹೂಡಿಕೆ
ಹಣ ಡಬಲ್ ಮಾಡಿಕೊಳ್ಳಲು ಮಲ್ಲಿಕಾರ್ಜುನ ಮೊದಲಿಗೆ 3 ಲಕ್ಷ ರೂ. ನೀಡಿದ್ದರು. ಆಗ ರಶೀದ್ ಮತ್ತಿತರರು ಒಂದು ಬಂಡಲ್ ಬ್ಲಾಕ್ ಪೇಪರ್ ಕೊಟ್ಟಿದ್ದರು. 35 ಲಕ್ಷ ರೂ. ಹೂಡಿಕೆ ಮಾಡಿದರೆ 75 ಲಕ್ಷ ರೂ. ಮಾಡಿಕೊಡುವುದಾಗಿ ಹೇಳಿದ್ದರು. ನಂಬಿದ ಮಲ್ಲಿಕಾರ್ಜುನ ಆರ್ಟಿಜಿಎಸ್ ಮತ್ತು ಫೋನ್ ಪೇ ಮೂಲಕ 28.30 ಲಕ್ಷ ರೂ. ಕಳುಹಿಸಿದ್ದರು. ಟಿಪ್ಪುನಗರದ ಮನೆಯೊಂದಕ್ಕೆ ತೆರಳಿದ್ದಾಗ 7 ಬಂಡಲ್ ಬ್ಲಾಕ್ ಪೇಪರ್, ಎರಡು ಬಗೆಯ ಕೆಮಿಕಲ್ ನೀಡಿದ್ದರು.
ಬಾಸ್ ಬಳಿ ಇದೆ ಇನ್ನೆರಡು ಕೆಮಿಕಲ್
ಇನ್ನೂ ಎರಡು ಬಗೆಯ ಕೆಮಿಕಲ್ ತಮ್ಮ ಬಾಸ್ ರಾಜಣ್ಣನ ಬಳಿ ಇದೆ. 4 ಲಕ್ಷ ರೂ. ನೀಡಿದರೆ ತಮ್ಮ ಮನೆಗೆ ಅವೆರಡು ಕೆಮಿಕಲ್ ತಂದು ಕೊಟ್ಟು, ಹಣ ಡಬಲ್ ಮಾಡುವುದನ್ನು ಹೇಳಿ ಕೊಡುವುದಾಗಿ ತಿಳಿಸಿದ್ದರು. ಬಹು ದಿನ ಕಳೆದರು ರಶೀದ್ ಕಡೆಯವರು ಮಲ್ಲಿಕಾರ್ಜುನ ಅವರ ಮನೆಗೆ ಬರಲಿಲ್ಲ. ಅಲ್ಲದೆ ಹಣವನ್ನೂ ಮರಳಿಸಲಿಲ್ಲ. ಈ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಶೀದ್ ಎಂಬಾತ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – KSRTC ಪ್ರಯಾಣಿಕರೆ ಹುಷಾರ್, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್ ಆಯ್ತು ವ್ಯಾನಿಟಿ ಬ್ಯಾಗ್, ಬಸ್ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್