ಶಿವಮೊಗ್ಗದ ಲೈವ್.ಕಾಂ | SHIMOGA NEWS | 13 ಫೆಬ್ರವರಿ 2022
ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಪ್ರತಿನಿಧಿಯೊಬ್ಬ ಮಹಿಳೆಯರಿಂದ ಹಣ ಸಂಗ್ರಹಿಸಿ ಕಂಪನಿಗೆ ಪಾವತಿಸದೆ ಪರಾರಿಯಾಗಿದ್ದಾನೆ. ಸಂಸ್ಥೆಯ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಲಾಗಿದೆ.
ವಿನೋಬನಗರದಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಫೀಲ್ಡ್ ಡೆವಲಪ್ ಮೆಂಟ್ ಆಫೀಸರ್ ರವೀಶ್ ಎಂಬಾತ ವಂಚನೆ ಮಾಡಿರುವ ಆರೋಪವಿದೆ. ಹಳ್ಳಿಗಳಿಗೆ ಹೋಗಿ ಮಹಿಳೆಯರಿಂದ ತಿಂಗಳ ಕಂತು ಕಟ್ಟಿಸಿಕೊಳ್ಳುವ ಜವಾಬ್ದಾರಿ ಈತನ ಮೇಲಿತ್ತು. ಇದನ್ನೆ ದುರುಪಯೋಗ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಿಲ್ ಕೊಟ್ಟಿಲ್ಲ, ಹಣ ಕಟ್ಟಿಲ್ಲ
ಮಹಿಳೆಯರಿಂದ ಹಣ ಪಡೆದಿರುವ ರವೀಶ, ಅವರಿಗೆ ಸರಿಯಾಗಿ ರಶೀದಿ ಕೊಟ್ಟಿಲ್ಲ. ಇನ್ನು, ಸಂಗ್ರಹಿಸಿದ ಹಣವನ್ನು ಸಂಸ್ಥೆಗೂ ಕಟ್ಟಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 1.27 ಲಕ್ಷ ರೂ. ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಶ್ನೆ ಮಾಡಿದಾಗ ರವೀಶ 33,451 ರೂ. ಹಣವನ್ನು ಹಿಂತಿರುಗಿಸಿದ್ದಾನೆ. ಉಳಿದ ಹಣವ ಮರಳಿಸುವ ಬದಲು ರವೀಶ ನಾಪತ್ತೆಯಾಗಿದ್ದಾನೆ.
ವ್ಯವಸ್ಥಾಪಕರಿಗೆ ಬೆದರಿಕೆ
ನಾಪತ್ತೆಯಾಗಿರುವ ರವೀಶ ಮೈಕ್ರೋ ಫೈನಾನ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದ ವ್ಯವಸ್ಥಾಪಕರಿಗೆ ಕರೆ ಮಾಡಿ, ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಕೆಲವು ಗ್ರಾಹಕರಿಗೆ ಕರೆ ಮಾಡಿ ಕಂತು ಕಟ್ಟುವಂತೆ ತಿಳಿಸುತ್ತಿದ್ದಾನೆ. ಮನೆಗಳಿಗೂ ಭೇಟಿ ನೀಡಿ ಹಣ ಕೊಡುವಂತೆ ಕೇಳುತ್ತಿದ್ದಾನೆ ಎಂದು ಗ್ರಾಹಕರು ಸಂಸ್ಥೆಗೆ ದೂರಿದ್ದಾರೆ.
ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.