SHIVAMOGGA LIVE NEWS | 19 OCTOBER 2023
THIRTHAHALLI : ಸಾರ್ವಜನಿಕರ ದೂರಿನ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರ (Araga Jnanendra) ಅವರು ತೀರ್ಥಹಳ್ಳಿ ತಾಲೂಕು ಕಚೇರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಚೇರಿ ಅವ್ಯವಸ್ಥೆ ಕಂಡು ಗರಂ ಆದರು.
ಬುಧವಾರ ಮಧ್ಯಾಹ್ನ ಶಾಸಕ ಆರಗ ಜ್ಞಾನೇಂದ್ರ ಅವರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ಕಚೇರಿಯ ವಿವಿಧೆಡೆ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿ ಸಿಡಿಮಿಡಿಗೊಂಡರು. ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲಿಸಿದರು.
ಇದನ್ನೂ ಓದಿ- ರಾಗಿಗುಡ್ಡಕ್ಕೆ ತೆರಳಬೇಕಿದ್ದ ಪ್ರಮೋದ್ ಮುತಾಲಿಕ್ಗೆ ಮಾಸ್ತಿಕಟೆಯಲ್ಲಿ ತಡೆ, ನೊಟೀಸ್ ಜಾರಿ
ರಜೆ ಚೀಟಿ ಇದ್ದರೂ ನಮೂದಾಗಿಲ್ಲ
ಸರ್ವೆ ಇಲಾಖೆಗೆ ಭೇಟಿ ನೀಡಿದ್ದ ವೇಳೆ ಕಚೇರಿಯಲ್ಲಿ ಸಿಬ್ಬಂದಿ ಇರಲಿಲ್ಲ. ಹಾಗಾಗಿ ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲಿಸಿದರು. ಸಿಬ್ಬಂದಿಯೊಬ್ಬರು ಕೊಟ್ಟಿದ್ದ ರಜೆ ಚೀಟಿ ಪುಸ್ತಕದಲ್ಲಿತ್ತು. ಆದರೆ ಅದನ್ನು ಹಾಜರಾತಿ ಪುಸ್ತಕದಲ್ಲಿ ನಮೂದು ಮಾಡಿರಲಿಲ್ಲ. ಇನ್ನು ಸಮರ್ಪಕವಾಗಿ ಸಹಿ ಮಾಡಿರಲಿಲ್ಲ. ಇದರಿಂದ ಸಿಟ್ಟಾದ ಶಾಸಕರು, ಇಂತಹ ತಪ್ಪುಗಳನ್ನು ಮಾಡದಂತೆ ತರಾಟೆಗೆ ತೆಗೆದುಕೊಂಡರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ನಿಯಮಿತವಾಗಿ ಕಡತ ವಿಲೇವಾರಿ ಮಾಡದಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆಯನ್ನು ತಕ್ಷಣ ಪರಿಹರಿಸಬೇಕು ಎಂದು ತಾಕೀತು ಮಾಡಿದರು.