ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MAY 2021
ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗುತ್ತೆ ಅಂತಾ ಜನರು ಶಂಕೆ ವ್ಯಕ್ತಪಡಿಸಿದ್ದರು. ಈಗ ಆಡಳಿತ ಪಕ್ಷದ ಶಾಸಕರೊಬ್ಬರು ಈ ಕುರಿತು ಪ್ರಶ್ನೆ ಎತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈ ಕುರಿತು ಪ್ರಶ್ನಿಸಿದ್ದಾರೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅವರ ಕಣ್ಣೊರೆಸಲು ಹೀಗೆ ಮಾಡ್ತಿದ್ದೀರಾ ಅಧಿಕಾರಿಗಳನ್ನು ಪ್ರಶ್ನಿಸಿದರು.
ಶಾಸಕರು ಪ್ರಸ್ತಾಪಿಸಿದ್ದೇನು?
ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾದವರನ್ನು ಮಾತ್ರ ಸೋಂಕಿತರು ಎಂದು ಪರಿಗಣಿಸಲಾಗುತ್ತದೆ. ಆದರೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬಂದು ಚಿಕಿತ್ಸೆಗೆ ದಾಖಲಾದವರನ್ನು ಈ ಪಟ್ಟಿಗೆ ಸೇರಿಸುತ್ತಿಲ್ಲ.
ಇದೆ ರೀತಿ ಸಾವಿನ ವಿಚಾರದಲ್ಲೂ ಸಮಸ್ಯೆ ಆಗುತ್ತಿದೆ. ಸಿಟಿ ಸ್ಕ್ಯಾನ್ ಪಟ್ಟಿಯಲ್ಲಿರುವವರು ಮೃತರಾದರೆ ಅದನ್ನು ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಗೆ ಸೇರಿಸುತ್ತಿಲ್ಲ.
ಸೋಂಕಿತರು ಚಿಕಿತ್ಸೆಗೆ ಬಂದಾಗ ಅವರಿಗೆ ಏನೇನು ಕಾಯಿಲೆ ಇದೆ ಎಂಬುದನ್ನು ಬರೆಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರು ಮೃತರಾದರೆ ಆ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಎಂದು ನೆಪ ಹೇಳಲಾಗುತ್ತಿದೆ.
ಅಧಿಕಾರಿಗಳು ಹೇಳಿದ್ದೇನು?
ಎಲ್ಲಾ ಬಗೆಯ ಸಾವನ್ನು ಆಡಿಟ್ ಮಾಡುತ್ತೇವೆ. ಸಿಟಿ ಸ್ಕ್ಯಾನ್ ವಿಚಾರವನ್ನೂ ಆಡಿಟ್ ಮಾಡಲಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಸಭೆಗೆ ತಿಳಿಸಿದರು.
ಇನ್ನು ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಮಾತನಾಡಿ, ಶಾಸಕರು ಹೇಳಿರುವುದನ್ನು ಪರಿಶೀಲನೆ ನಡೆಸುತ್ತೇವೆ ಎಂದರು.