ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 10 ಡಿಸೆಂಬರ್ 2021
ಮತದಾನ ಬಹಿಷ್ಕಾರದ ನಿರ್ಧಾರ ಪ್ರಕಟಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ಇಬ್ಬರ ಹೊರತು ಉಳಿದವರು ಮತದಾನ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಲಾಗಿತ್ತು.
ಮರಳು ಕ್ವಾರಿಗಳ ರಾಜಧನ ಬಿಡುಗಡೆ ಮಾಡಲು, ಸರ್ಕಾರ ವಿಳಂಬ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿಯ ಏಳು ಸದಸ್ಯರು ನಿರ್ಧರಿಸಿದ್ದರು.
ಐವರು ಮತದಾನ ಮಾಡಿದರು
ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಂಚಾಯಿತಿಯ ಐವರು ಸದಸ್ಯರು ಮತದಾನ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ಸುಜಾತಾ, ಕೊಳಿಗೆ ಸದಸ್ಯರಾದ ಎಂ.ಜಿ.ಮೋಹನ್, ಅನಿತಾ, ಶಿವಳ್ಳಿ ಸದಸ್ಯರಾದ ದ್ವಿಜರಾಜ್ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇಬ್ಬರು ಮತ ಹಾಕಿಲ್ಲ
ದಾಸನ ಕೊಡಿಗೆ ಸದಸ್ಯರಾದ ಸುಧಾ ಮತ್ತು ಹುರುಳಿ ಸದಸ್ಯರಾದ ಬಿ.ಜಿ.ಸಂದೀಪ್ ಅವರು ಈವರೆಗೂ ಮತದಾನ ಮಾಡಿಲ್ಲ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸಂದೀಪ್ ಅವರು, ‘ತಾವು ಯಾವುದೆ ಕಾರಣಕ್ಕೂ ಮತದಾನ ಮಾಡುವುದಿಲ್ಲ. ರಾಜಧನ ವಿಚಾರವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೆ ಒಂದು ಮಾತನಾಡಿಲ್ಲ. ಹಾಗಾಗಿ ಬಹಿಷ್ಕಾರ ಮಾಡಿದ್ದೇನೆ. ಉಳಿದ ಸದಸ್ಯರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವೇನು ಗೊತ್ತಿಲ್ಲ’ ಎಂದು ತಿಳಿಸಿದರು.
ಬಹಿಷ್ಕಾರಕ್ಕೆ ಕಾರಣ ಏನು?
ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಮರಳು ಕ್ವಾರಿಗಳಿವೆ. ಇವುಗಳಿಂದ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 84 ಲಕ್ಷ ರೂ. ರಾಜಧನ ಬಿಡುಗಡೆಯಾಗಬೇಕು. ಕಳೆದ ಎರಡು ವರ್ಷದಿಂದ ರಾಜಧನ ಬಿಡುಗಡೆಯಾಗಿಲ್ಲ. ಹಾಗಾಗಿ 1.68 ಕೋಟಿ ರೂ. ರಾಜಧನ ಬಾಕಿ ಇದೆ. ಇದನ್ನು ಬಿಡುಗಡೆ ಮಾಡಬೇಕು, ಗ್ರಾಮದ ಅಭಿವೃದ್ಧಿಗೆ ಈ ಹಣ ಪ್ರಮುಖ. ಹಾಗಾಗಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರವಾಗಿತ್ತು.