ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 APRIL 2024
SHIMOGA : ‘ಪ್ರಧಾನಿ ನರೇಂದ್ರ ಮೋದಿ ಯಾರಿಗೆ ಸೇರಿದವರು?’, ಬಿಜೆಪಿ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಧ್ಯೆ ಹೀಗೊಂದು ಜಿಜ್ಞಾಸೆ ಎದುರಾಗಿದೆ. ಇದೇ ಕಾರಣಕ್ಕೆ ಮಾಜಿ ಸಚಿವ ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದಾರೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಇಷ್ಟಕ್ಕೂ ಆಗಿದ್ದೇನು?
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧೆಗಿಳಿದಿದ್ದಾರೆ. ರಾಷ್ಟ್ರಭಕ್ತರ ಬಳಗದ ಬ್ಯಾನರ್ನ ಅಡಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಫ್ಲೆಕ್ಸ್ನಲ್ಲಿ ಬಳಸುತ್ತಿದ್ದಾರೆ. ಇದು ಬಿಜೆಪಿಯವರ ಆಕ್ಷೇಪಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದಾರೆ.
ಮೋದಿ ಅವರಪ್ಪನ ಆಸ್ತಿನಾ?
ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಪ್ಪ, ‘ಮೋದಿ ಫೋಟೋ ಬಳಸಿಕೊಳ್ಳಬಾರದು ಎನ್ನಲು ಮೋದಿ ಅವರು ರಾಘವೇಂದ್ರ ಅಪ್ಪನ ಮನೆಯ ಆಸ್ತಿ ಅಲ್ಲ. ಮೋದಿ ವಿಶ್ವ ನಾಯಕ. ಮೋದಿಯನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಆದರೆ ಯಡಿಯೂರಪ್ಪ ಅವರ ಹೃದಯದಲ್ಲಿ ಬೇರೆಯವರೇ ಇದ್ದಾರೆ’ ಎಂದು ಟೀಕಿಸಿದ್ದರು.
ಕೋರ್ಟ್ ಮೊರೆ ಹೋದ ಈಶ್ವರಪ್ಪ
ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಕೆ.ಎಸ್.ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಎದುರು ಪಾರ್ಟಿ ಮಾಡಿದ್ದಾರೆ. ಕೋರ್ಟ್ ಅರ್ಜಿ ಪುರಸ್ಕರಿಸಿದ ಬಳಿಕ ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ – ಕುಮಾರ್ ಬಂಗಾರಪ್ಪ ಮನೆಗೆ ರಾಘವೇಂದ್ರ ಭೇಟಿ, ಅರ್ಧ ಗಂಟೆ ಚರ್ಚೆ, ಬಿಜೆಪಿಗೆ ಕುಮಾರ್ ಯಾಕಷ್ಟು ಮುಖ್ಯ?
ಬಿಜೆಪಿ ಹೇಳೋದೇನು?
ಇನ್ನು ಕೇವಿಯಟ್ ಅರ್ಜಿ ಸಲ್ಲಿಕೆ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ‘ಈಶ್ವರಪ್ಪ ಅವರು ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ. ಚುನಾವಣೆ ಮತ್ತು ಮತದ ಕಾರಣಕ್ಕೆ ಮೋದಿ ಅವರ ಭಾವಚಿತ್ರವನ್ನು ಬಿಜೆಪಿ ಹೊರತಾಗಿ ಮತ್ಯಾರು ಬಳಕೆ ಮಾಡುವಂತ್ತಿಲ್ಲ. ಈ ಸಂಬಂಧ ಕಾನೂನಾತ್ಮಕ ಹೋರಾಟವನ್ನು ಬಿಜೆಪಿ ಮುಂದುವರೆಸಲಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕು ಕೂಡ ನಾವು ಹೋಗಿದ್ದೇವೆʼ ಎಂದು ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ