ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಅಕ್ಟೋಬರ್ 2020
ಕೋವಿಡ್ ಹಿನ್ನೆಲೆ, ಶಿವಮೊಗ್ಗ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಈ ಬಾರಿ ನವರಾತ್ರಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಯಾವೆಲ್ಲ ದೇಗುಲದಲ್ಲಿ ಹೇಗಿರುತ್ತೆ ಆಚರಣೆ?
ಹೊಂಬುಜ ಪದ್ಮಾವತಿ
ಜಿಲ್ಲೆಯ ರಿಪ್ಪನ್ಪೇಟೆ ಹೋಬಳಿಯಲ್ಲಿ ಹುಂಚ ಪದ್ಮಾವತಿ ದೇವಾಲಯದಲ್ಲಿ ಈ ಬಾರಿ ಸರಳ ನವರಾತ್ರಿ ಉತ್ಸವ ನಡೆಯಲಿದ್ದು ಯಾವುದೇ ಆಹ್ವಾನ ಪತ್ರಿಕೆ ಮುದ್ರಿಸಿಲ್ಲ. ಆಹ್ವಾನ ನೀಡಿಲ್ಲ. ಬರುವ ಭಕ್ತರ ಆಧಾರದ ಮೇಲೆ ಪ್ರಸಾದದ ವ್ಯವಸ್ಥೆ ಕಲ್ಪಿಸಲು ದೇವಸ್ಥಾನ ಮಂಡಳಿ ನಿರ್ಧರಿಸಿದೆ. 9 ದಿನ 9 ಅಲಂಕಾರ, 10ನೇ ಆಯುಧ ಪೂಜೆ, 11ನೇ ದಿನ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳ ಪೀಠಾರೋಹಣ ಮಹೋತ್ಸವ ನಡೆಯಲಿದೆ.
ಕೋಟೆ ಮಾರಿಕಾಂಬಾ
ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಶಿವಮೊಗ್ಗ ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿ ಈ ಬಾರಿ ಸರಳ ನವರಾತ್ರಿ ನಡೆಯಲಿದೆ. ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ಯಾವುದೇ ತೀರ್ಥ, ಪ್ರಸಾದ ವಿನಿಯೋಗ, ಹೋಮ ಹವನಗಳು ಮಾಡುವುದಿಲ್ಲ.
ಸಿಗಂದೂರು ಚೌಡೇಶ್ವರಿ
ರಾಜ್ಯದ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲೂ ಈ ಬಾರಿ ಸರಳ ನವರಾತ್ರಿ ನಡೆಯಲಿದೆ. ಈ ಬಾರಿ ಚಂಡಿಕಾಹೋಮಕ್ಕೂ ಕೋಕ್ ನೀಡಲಾಗಿದೆ. ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಪ್ರಸ್ತುತ ಇರುವಂತೆ ಸಾಮಾನ್ಯ ಪೂಜೆ ನಡೆಯಲಿದೆ.
ಚಂದ್ರಗುತ್ತಿ ರೇಣುಕಾಂಬಾ
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದಲ್ಲಿ ಜನಸಂದಣಿ ಸೇರದಂತೆ ಸರಳವಾಗಿ ದಸರಾ ಆಚರಣೆ ಮಾಡಲು ತಹಸೀಲ್ದಾರ್ ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ವಿಶೇಷ ಪೂಜೆ, ಹಣ್ಣು ಕಾಯಿ ಸೇವೆಗಳು ಇರುವುದಿಲ್ಲ ತಿಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]