ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MARCH 2021
ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಸುನೀತಾ ಅಣ್ಣ, ಉಪ ಮೇಯರ್ ಆಗಿ ಶಂಕರ್ ಗನ್ನಿ ಆಯ್ಕೆಯಾಗಿದ್ದಾರೆ. ಇವತ್ತು ನಡೆದ ಚುನಾವಣೆಯಲ್ಲಿ ನಗರದ ನೂತನ ಪ್ರಥಮ ಪ್ರಜೆಗಳನ್ನು ಆಯ್ಕೆ ಮಾಡಲಾಯಿತು.
ಯಾರಿಗೆಷ್ಟು ಮತ ಲಭಿಸಿದವು?
ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮೀಸಲಾತಿ ಘೋಷಣೆಯಾಗಿತ್ತು. ಬಿಜೆಪಿಯ ಸುನೀತಾ ಅಣ್ಣಪ್ಪ ಮತ್ತು ಕಾಂಗ್ರೆಸ್ ಪಕ್ಷದ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಸುನೀತಾ ಅಣ್ಣಪ್ಪ ಅವರಿಗೆ 25 ಮತಗಳು, ರೇಖಾ ರಂಗನಾಥ್ ಅವರಿಗೆ 11 ಮತಗಳು ಬಂದಿವೆ.
ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿಯ ಶಂಕರ್ ಗನ್ನಿ ಮತ್ತು ಕಾಂಗ್ರೆಸ್ನ ಆರ್.ಸಿ.ನಾಯ್ಕ್ ಸ್ಪರ್ಧಿಸಿದ್ದರು. ಶಂಕರ್ ಗನ್ನಿ ಅವರಿಗೆ 24 ಮತಗಳು, ಆರ್.ಸಿ.ನಾಯ್ಕ್ ಅವರಿಗೆ 11 ಮತಗಳು ಲಭಿಸಿವೆ.
ಬಿಜೆಪಿಯ ಒಬ್ಬ ಸದಸ್ಯ ತಟಸ್ಥ
ಉಪ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿ ಓರ್ವ ಸದಸ್ಯ ತಟಸ್ಥವಾಗಿ ಉಳಿದರು. ಇದರಿಂದ 25 ಮತಗಳ ಬದಲು 24 ಮತಗಳಷ್ಟೆ ಲಭಿಸಿದವು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯ ಎಸ್ .ಜಿ.ರಾಜು ಅವರು ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಸದಸ್ಯರು ಅವರನ್ನು ಮನವೊಲಿಸಿ ಚುನಾವಣೆಗೆ ಕರೆದೊಯ್ದಿದ್ದರು.
ಚುನಾವಣೆ ವೇಳೆ ಉಪ ಮೇಯರ್ ಸ್ಥಾನಕ್ಕೆ ಮತ ಚಲಾಯಿಸದೆ ಪ್ರತಿಭಟಿಸಿದರು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಈ ಸಂಬಂಧ ನಗರ ಸಮಿತಿಯವರು ಜಿಲ್ಲಾ ಘಟಕಕ್ಕೆ ದೂರು ನೀಡಲಿದ್ದಾರೆ. ಜಿಲ್ಲಾ ಕಮಿಟಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ನೂತನ ಮೇಯರ್, ಉಪ ಮೇಯರ್ ಆಯ್ಕೆಯ ಬೆನ್ನಿಗೆ ಬಿಜೆಪಿ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ನಡೆಸಿದರು. ನೂತನ ಮೇಯರ್, ಉಪ ಮೇಯರ್ ಅವರಿಗೆ ಹೂಗುಚ್ಛ, ಹಾರ ಹಾಕಿ ಸಂಭ್ರಮಿಸಿದರು.
ನಾಡದೇವಿಗೆ ನಮಿಸಿ ಅಧಿಕಾರ
ನೂತನ ಮೇಯರ್ ಸುನೀತಾ ಅಣ್ಣಪ್ಪ ಅವರು, ಅಧಿಕಾರ ಸ್ವೀಕಾರಕ್ಕೂ ಮೊದಲು ಪಾಲಿಕೆ ಕಟ್ಟಡದ ಒಳಗಿರುವ ನಾಡದೇವಿ ಚಾಮುಂಡೇಶ್ವರಿ ಮತ್ತು ಬಸವಣ್ಣನ ಪ್ರತಿಮೆಗೆ ನಮನ ಸಲ್ಲಿಸಿದರು.
VIDEO REPORT
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]