ಶಿವಮೊಗ್ಗ: ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಳಿಕ ಹೆಲಿಕಾಪ್ಟರ್ನಲ್ಲಿ ಚಿತ್ರದುರ್ಗಕ್ಕೆ ಪ್ರಯಾಣಿಸಿದರು.
ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇಂದು ಮಧ್ಯಾಹ್ನ ಗಡಿ ಭದ್ರತಾ ಪಡೆ (BSF) ವಿಶೇಷ ವಿಮಾನದಲ್ಲಿ ಅಮಿತ್ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಕೋಲ್ಕತ್ತಾದಿಂದ ಶಿವಮೊಗ್ಗಕ್ಕೆ ಆಗಮನ
ಪಶ್ಚಿಮ ಬಂಗಾಳದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅಮಿತ್ ಷಾ ಭಾಗವಹಿಸಿದ್ದರು. ಮಧ್ಯಾಹ್ನ 1:16ಕ್ಕೆ ಕೋಲ್ಕತ್ತಾದಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ಹೊರಟಿದ್ದರು. ಮಧ್ಯಾಹ್ನ 3:42ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಆಗಮಿಸಿತು. ಕೆಲವು ನಿಮಿಷದ ಬಳಿಕ ಅಮಿತ್ ಷಾ ಅವರು ಸೇನಾ ಹೆಲಿಕಾಪ್ಟರ್ನಲ್ಲಿ ಚಿತ್ರದುರ್ಗಕ್ಕೆ ತೆರಳಿದರು.
ಶಿವಮೊಗ್ಗದಿಂದ ದೆಹಲಿಗೆ ನೇರ ಪ್ರಯಾಣ
ಗೃಹ ಸಚಿವ ಅಮಿತ್ ಷಾ ಅವರು ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆ 6:10ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಿಎಸ್ಎಫ್ ವಿಶೇಷ ವಿಮಾನದಲ್ಲಿ ಸಂಜೆ 6:15ಕ್ಕೆ ಹೊರಡಲಿದ್ದು, ರಾತ್ರಿ 8:50ಕ್ಕೆ ದೆಹಲಿಗೆ ತಲುಪಲಿದ್ದಾರೆ.

ರಸ್ತೆ ಉದ್ದಕ್ಕು ಪೊಲೀಸ್ ಬಂದೋಬಸ್ತ್
ಇನ್ನು, ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧ ರಸ್ತೆಗಳು ಮತ್ತು ಚಿತ್ರದುರ್ಗ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಮಿತ್ ಷಾ ಅವರು ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುವ ಸನ್ನಿವೇಶ ಎದುರಾದರೆ ಭದ್ರತೆಯ ಅಗತ್ಯತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದಲೇ ಪ್ರತಿ ಊರು, ಅಡ್ಡ ರಸ್ತೆ, ಡಿವೈಡರ್ಗಳ ಬಳಿ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ. ಶಿವಮೊಗ್ಗ ಮಾತ್ರವಲ್ಲದೆ ವಿವಿಧ ತಾಲೂಕು, ನೆರೆಯ ಜಿಲ್ಲೆಗಳ ಪೊಲೀಸರನ್ನು ಕೂಡ ಭದ್ರತೆಗೆ ನಿಯೋಜನೆ ಮಾಡಲಾಗಿದೆ.


