ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳ ಸ್ನಾತಕೋತ್ತರ (ಪಿ.ಜಿ) ಕೋರ್ಸ್ಗಳ ಪ್ರವೇಶಾತಿಯನ್ನು ಪ್ರಸಕ್ತ ಸಾಲಿನ ಅಧಿಸೂಚನೆಯಿಂದ ಕೈಬಿಟ್ಟಿರುವುದು ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನಿರ್ಧಾರವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ವಿಶ್ವವಿದ್ಯಾಲಯದ ಕುಲಸಚಿವ ಎನ್.ಹೇಮಂತ್ ಅವರನ್ನು ಭೇಟಿಯಾದ ಶಾಸಕ ಚನ್ನಬಸಪ್ಪ, ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿಯನ್ನು ಯಥಾವತ್ತಾಗಿ ಮುಂದುವರಿಸಿ ತಕ್ಷಣವೇ ಪರಿಷ್ಕೃತ ಅಧಿಸೂಚನೆ ಹೊರಡಿಸಬೇಕು. ಎಂ.ಎಸ್ಸಿ ಬಯೋಟೆಕ್ನಾಲಜಿ, ಎಂ.ಎಸ್ಸಿ ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಎಂ.ಎಸ್ಸಿ ಜನರಲ್ ಕೆಮಿಸ್ಟ್ರಿ ಹಾಗೂ ಎಂ.ಎ. ರಾಜ್ಯಶಾಸ್ತ್ರ ಕೋರ್ಸ್ಗಳ ಪ್ರವೇಶಾತಿಗೆ ತಕ್ಷಣವೇ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕಳೆದ 75 ವರ್ಷಗಳಿಂದ ಸಹ್ಯಾದ್ರಿ ಕಾಲೇಜು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿದೆ. ಇತ್ತೀಚೆಗೆ ಬಯೋಟೆಕ್ನಾಲಜಿಯಲ್ಲಿ ವಿವಿಯ 10 ರಾಂಕ್ಗಳಲ್ಲಿ 5 ಹಾಗೂ ರಾಜ್ಯಶಾಸ್ತ್ರದಲ್ಲಿ 2 ರಾಂಕ್ಗಳನ್ನು ಸಹ್ಯಾದ್ರಿ ಕಾಲೇಜಿನ ಪಿ.ಜಿ ವಿದ್ಯಾರ್ಥಿಗಳು ಪಡೆದಿದ್ದಾರೆ. ಖಾಯಂ ಪ್ರಾಧ್ಯಾಪಕರನ್ನೇ ಹೊಂದಿರುವ ಈ ಕೋರ್ಸ್ಗಳಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆ ಇರಲಿಲ್ಲ. ಆದರೂ ದಿಢೀರನೆ ಪ್ರವೇಶಾತಿ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಶಾಸಕ ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.
ಸಹ್ಯಾದ್ರಿ ಕಾಲೇಜು ಸಾರಿಗೆ ಮತ್ತು ಆರ್ಥಿಕ ದೃಷ್ಟಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ವಿಶ್ವವಿದ್ಯಾಲಯವು ತಕ್ಷಣವೇ ಪರಿಷ್ಕೃತ ಅಧಿಸೂಚನೆ ಹೊರಡಿಸದಿದ್ದರೆ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ನಡೆಸಬೆಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.