ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿಜ್ಞಾನ ವಿವಿಗೆ ನೂತನ ಕುಲಪತಿ ನೇಮಕ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಹಿರಿಯ ವಿಜ್ಞಾನಿ ಡಾ. ಎಂ. ವಿ. ಧನಂಜಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಡಾ. ಎಂ.ವಿ. ಧನಂಜಯ ಅವರು ಬೆಂಗಳೂರಿನ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (ICAR-IIHR) ಸಸ್ಯ ತಳಿ ಅಭಿವೃದ್ಧಿ ವಿಭಾಗದ ಪ್ರಧಾನ ವಿಜ್ಞಾನಿಯಾಗಿದ್ದಾರೆ. ತೋಟಗಾರಿಕಾ ಸಂಶೋಧನೆ ಮತ್ತು ಸಸ್ಯ ತಳಿವರ್ಧನೆ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿದ್ದಾರೆ.

new-vc-for-Agriculture-University-Dr-Dhananjaya.

ಡಾ. ಧನಂಜಯ ಅವರ ಪ್ರಮುಖ ಸಾಧನೆಗಳು

ಡಾ. ಧನಂಜಯ ಅವರು ತೋಟಗಾರಿಕಾ ಕ್ಷೇತ್ರದ ವಿವಿಧ 18 ನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ದೇಶದ ಮೊದಲ ಕಾಂಡ ಕೊಳೆ ರೋಗ ನಿರೋಧಕ ಸೋರೆಕಾಯಿ ತಳಿ ಅರ್ಕಾ ಶ್ರೇಯಸ್, ಅತಿ ಹೆಚ್ಚು ಇಳುವರಿ ನೀಡುವ ಗುಲಾಬಿ ತಳಿ ಅರ್ಕಾ ಸವಿ ಹಾಗೂ ಗುಲಾಬಿ ಚಹಾದ ತಳಿ ಅರ್ಕಾ ಪರಿಮಳ ಪ್ರಮುಖವಾಗಿವೆ. ಇವರ ನೇತೃತ್ವದಲ್ಲಿ ₹29 ಕೋಟಿ ಮೌಲ್ಯದ ಸಂಶೋಧನಾ ಯೋಜನೆಗಳು ಅನುಷ್ಠಾನಗೊಂಡಿದ್ದು, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಭಾರತ ಸರ್ಕಾರದ ಬೆಸ್ಟ್‌-ಹಾರ್ಟ್‌ ತಂತ್ರಜ್ಞಾನ ವ್ಯವಹಾರ ಇನ್ಯುಬೇಟರ್ ಸಿಇಒ ಆಗಿ ಡಾ. ಧನಂಜಯ ಅವರು  ಕಾರ್ಯನಿರ್ವಹಿಸಿದ್ದಾರೆ. 100ಕ್ಕೂ ಹೆಚ್ಚು ಕೃಷಿ ನವೋದ್ಯಮಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲದೆ, ತರಕಾರಿ ಬೀಜ ಘಟಕದ ನೋಡಲ್ ಅಧಿಕಾರಿಯಾಗಿ ಆನ್‌ಲೈನ್ ಬೀಜ ಪೋರ್ಟಲ್ ಮತ್ತು ಬೀಜ ವಿತರಣಾ ಯಂತ್ರಗಳ ಮೂಲಕ ಸಾರ್ವಜನಿಕ ಬೀಜ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ತೋಟಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಎಂ.ವಿ.ಧನಂಜಯ ಅವರಿಗೆ ‘ಡಾ. ಎಂ.ಹೆಚ್. ಮರಿಗೌಡ ರಾಷ್ಟ್ರೀಯ ದತ್ತಿ ಪ್ರಶಸ್ತಿ’ (2022-23) ಹಾಗೂ ‘ಡಾ. ಕಲ್ಲಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ’ (2023-24) ಲಭಿಸಿದೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗೌರವಾನ್ವಿತ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ರಾಜ್ಯಪಾಲರು ಇವರನ್ನು ಆರು ಬಾರಿ ‘ತಜ್ಞರ ಪರಿಶೀಲನಾ ಸಮಿತಿ’ಗೆ ನಾಮನಿರ್ದೇಶನ ಮಾಡಿದ್ದರು. ರಾಷ್ಟ್ರೀಯ ತೋಟಗಾರಿಕಾ ಮೇಳಗಳನ್ನು ಯಶಸ್ವಿಯಾಗಿ ಸಂಘಟಿಸಿದ ಆಡಳಿತಾತ್ಮಕ ಅನುಭವವನ್ನೂ ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.