ಶಿವಮೊಗ್ಗ ಜಿಲ್ಲೆಯ ಹತ್ತು ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್ನಲ್ಲಿ ಲಭ್ಯ. ಇಲ್ಲಿದೆ ಈವರೆಗಿನ ಪ್ರಮುಖಾಂಶ (Highlights)
ಬೆಳಗಿನ ಜಾವ ಭೀಕರ ಅಪಘಾತ
ಶಿವಮೊಗ್ಗ: ಗಾಜನೂರು ಸಮೀಪ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ನ ನಿರ್ವಾಹಕ ಅಣ್ಣಪ್ಪ (40), ಹರ್ಷಿತ್ (35) ಮೃತರಾಗಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ತುಂಗಾ ನಗರ ಠಾಣೆ ಪೊಲೀಸರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮತ್ತೆ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಶಿವಮೊಗ್ಗ: 12 ವರ್ಷದ ಬಳಿಕ ನಗರದ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ಸಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಕುರಿತು ಚರ್ಚಿಸಲಾಯಿತು. ಸಿಂಥಟೆಕ್ ಟ್ರ್ಯಾಕ್ಗೆ ಹಾನಿ ಆಗದಂತೆ ಕ್ರಮ ವಹಿಸಿ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ನೂತನ ಸಿಸಿಎಫ್ ನೇಮಕ
ಶಿವಮೊಗ್ಗ: ಶಿವಮೊಗ್ಗ ಅರಣ್ಯ ವೃತ್ತದ ನೂತನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹೀರಾಲಾಲ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಹೀರಾಲಾಲ್ ಅವರು ಚಾಮರಾಜನಗರದ ಸಿ.ಸಿ.ಎಫ್ ಆಗಿದ್ದರು. ಅವರ ಸ್ಥಾನಕ್ಕೆ ಶಿವಮೊಗ್ಗದ ಸಿ.ಸಿ.ಎಫ್ ಆಗಿದ್ದ ಡಾ. ಕೆ.ಟಿ.ಹನುಮಂತಪ್ಪ ಅವರನ್ನು ವರ್ಗಾಯಿಸಲಾಗಿದೆ.
ಕಳೆದುಹೋಗಿದ್ದ 110 ಮೊಬೈಲ್ ಪತ್ತೆ
ಶಿವಮೊಗ್ಗ: ಕಳೆದು ಹೋಗಿದ್ದ 110 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿದ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ. ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಅವರು ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ » ಮೈದೊಳಲು ಕಾರ್ಣಿಕ, ‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ’, ಏನಿದರ ಅರ್ಥ?
ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ತೀರ್ಥಹಳ್ಳಿ: ನಾಲ್ಕು ದಿನದಿಂದ ನಾಪತ್ತೆಯಾಗಿದ್ದ ಹೊನ್ನೇತಾಳು ಗ್ರಾಮದ ಚಂಗಾರು ಗ್ರಾಮದ ರಮೇಶ (59) ಶವವಾಗಿ ಪತ್ತೆಯಾಗಿದ್ದಾರೆ. ಜು.26ರಂದು ಜಮೀನಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದ ರಮೇಶ ಕಾಣೆಯಾಗಿದ್ದರು. ಕಲ್ಲುಗುಡ್ಡ ಸಮೀಪ ಮೃತದೇಹ ಪತ್ತೆಯಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈದೊಳಲಿನಲ್ಲಿ ಹನುಮಂತ ದೇವರ ಕಾರ್ಣಿಕ
ಹೊಳೆಹೊನ್ನೂರು: ನಾಗರಪಂಚಮಿಯಂದು ಮೈದೊಳಲಿನಲ್ಲಿ ಹನುಮಂತ ದೇವರ ಕಾರ್ಣಿಕೋತ್ಸವ ನಡೆಯಿತು. ಶಿವನ ತುರುಬಿಗೆ ಪಂಜರದ ಗಿಳಿ ಹಾರೀತು ಎಚ್ಚರ ಎಂದು ಗಣಮಗ ಕಾರ್ಣಿಕ ನುಡಿದಿದ್ದಾರೆ. ಪಿಳ್ಳೆಮಟ್ಟಿ ಗುಡ್ಡದಲ್ಲಿ ಪ್ರತಿ ನಾಗರಪಂಚಮಿಗೆ ಕಾರ್ಣಿಕ ನುಡಿಯಲಾಗುತ್ತದೆ.
ಇದನ್ನೂ ಓದಿ » ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ
ಜಿಲ್ಲೆಯಲ್ಲಿ ಶ್ರದ್ಧೆ, ಭಕ್ತಿಯಿಂದ ನಾಗರಪಂಚಮಿ
ಶಿವಮೊಗ್ಗ: ಜಿಲ್ಲೆಯಾದ್ಯಂತ ಶ್ರದ್ಧೆ, ಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಯಿತು. ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ, ಹಾಲೆರೆದು ಭಕ್ತರು ಪುನೀತರಾದರು. ಹಲವೆಡೆ ಕುಟುಂಬ ಸಹಿತ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಲಾಯಿತು.

ಬಾಲ್ಯ ವಿವಾಹ ತಡೆಗೆ ಕೈಜೋಡಿಸಿ
ಸಾಗರ: ಸಾಮಾಜಿಕ ಅನಿಷ್ಟವಾದ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ನಗರಸಭೆಯ ಬಯಲು ರಂಗಮಂದಿರದಲ್ಲಿ ನಡೆದ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ
ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.12ರಿಂದ 14ರ ವರೆಗೆ ರಾಜ್ಯವ್ಯಾಪಿ ಜಿಲ್ಲಾ ಮಟ್ಟದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ (ಎಐಯುಟಿಯುಸಿ) ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದರು.
ಸಚಿವ ಮಧು ಬಂಗಾರಪ್ಪ ಸೊರಬಕ್ಕೆ ಭೇಟಿ
ಸೊರಬ: ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಂದು ಸೊರಬ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10ಕ್ಕೆ ಸೊರಬ ಪುರಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11ಕ್ಕೆ ಸೊರಬದ ರಂಗಮಂದಿರದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.
