SHIVAMOGGA LIVE NEWS | 20 APRIL 2024
RAIN REPORT : ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಈ ಮಧ್ಯೆ ಅಲ್ಲಲ್ಲಿ ಮಳೆಯಿಂದಾಗಿ ಹಾನಿಯಾಗಿದೆ. ಸಿಡಿಲು ಬಡಿದು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಏನೇನು ಹಾನಿಯಾಗಿದೆ?
ಸಿಡಿಲಿಗೆ ವ್ಯಕ್ತಿ ಬಲಿ
ಸಿಡಿಲು ಬಡಿದು ಶಿವಮೊಗ್ಗ ತಾಲೂಕು ಹರಮಘಟ್ಟದ ರಾಕೇಶ್ (28) ಮೃತಪಟ್ಟಿದ್ದಾರೆ. ರುದ್ರೇಶ್ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಶುಕ್ರವಾರ ಸಂಜೆ ಅಡಿಕೆ ತೋಟದಲ್ಲಿ ಕೆಲಸ ಮುಗಿಸಿ ಇಬ್ಬರು ಮನೆಗೆ ಮರಳುವಾಗ ಘಟನೆ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸಾಗರದ ವಿವಿಧೆಡೆ ಮಳೆಯಿಂದ ಹಾನಿ
ಮಳೆ, ಗಾಳಿಗೆ ಸಾಗರ ತಾಲೂಕಿನ ವಿವಿಧೆಡೆ ಹಾನಿ ಉಂಟಾಗಿದೆ. ಆನಂದಪುರ ಸುತ್ತಮುತ್ತ ಜಮೀನುಗಳಲ್ಲಿ ಬೆಳೆ ನೆಲಕಚ್ಚಿವೆ. ಬೈರಾಪುರದ ನಿತ್ಯಾನಂದ ಎಂಬುವವರ ಬಾಳೆತೋಟದಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ ಬೆಳೆಹಾನಿ ಉಂಟಾಗಿದೆ. ಕಣ್ಣೂರಿನಲ್ಲಿ ಮರ ಬಿದ್ದು ಭರ್ಮಪ್ಪ ಅವರ ಅಡಿಕೆ ತೋಟದಲ್ಲಿ ಅಡಿಕೆ ಮರಗಳು ಹಾನಿಗೀಡಾಗಿವೆ. ಸುತ್ತಮುತ್ತಲ ಗ್ರಾಮಗಳಲ್ಲಿ ಬಾಳೆ, ಅಡಿಕೆ, ಜೋಳದ ಬೆಳೆಗಳು ಹಾನಿಗೀಡಾದ ವರದಿಯಾಗಿದೆ.
ಮನೆ ಮೇಲೆ ಬಿದ್ದ ಮರ
ಸಾಗರ ತಾಲೂಕು ಹೊಸಕೊಪ್ಪ ಗ್ರಾಮದ ಯಶೋದಮ್ಮ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಣ್ಣೂರಿನ ಪಾರ್ವತಮ್ಮ ಎಂಬುವವರ ಮನೆ ಗೋಡೆ ಕುಸಿದಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತ್ಯಾಗರ್ತಿ ಸುತ್ತಮುತ್ತ ವಿವಿಧೆಡೆ ಬೆಳೆ ಹಾನಿ ಉಂಟಾಗಿದೆ. ಕೋಟೆಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಮೇಲ್ಛಾವಣಿ ಶೀಟ್ ಹಾರಿ ಹೋಗಿದೆ. ಕಾರ್ಗಲ್ನ ರೇಣುಕಾ ಯಲ್ಲಮ್ಮ ದೇಗುಲದ ಮುಂಭಾಗ ಅಳವಡಿಸಿದ್ದ ಶೀಟ್ ಹಾರಿ ಹೋಗಿದೆ. ಕಾರ್ಗಲ್, ಜೋಗ ಸುತ್ತಮುತ್ತ ಮರಗಳು ಧರೆಗುರುಳಿದ್ದು, ಪಟ್ಟಣ ಪಂಚಾಯಿತಿ ವತಿಯಿಂದ ತೆರವು ಮಾಡಲಾಗಿದೆ.
ಹೊಸನಗರದಲ್ಲಿ ಮನೆ ಮೇಲೆ ಬಿದ್ದ ಮರ
ಹೊಸನಗರ ತಾಲೂಕು ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಚ ರಸ್ತೆ ನಿವಾಸಿ ಮಂಜುನಾಥ್ ಅವರ ಮನೆ ಮತ್ತು ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳು ಬುಡಮೇಲಾಗುವ ಸಾಧ್ಯತೆ ಇದೆ. ಅವುಗಳನ್ನು ಕಡಿತಲೆ ಮಾಡಬೇಕು ಎಂದು ಮಂಜುನಾಥ್ ಆಗ್ರಹಿಸಿದ್ದಾರೆ.
ಮೆಕ್ಕೆಜೋಳ ಬೆಳೆ ನಷ್ಟ
ಸೊರಬ ತಾಲೂಕಿನ ವಿವಿಧೆಡೆ ಗಾಳಿ ಸಹಿತ ಜೋರು ಮಳೆಯಾಗಿದೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮಧ್ಯೆ ಹಲವು ಕಡೆ ಮರಗಳು ಧರೆಗುರುಳಿದ್ದು, ಬೆಳೆ ಹಾನಿಯೂ ಉಂಟಾಗಿದೆ. ಹಾಲಗಳಲೆ ಗ್ರಾಮದಲ್ಲಿ ಮೆಕ್ಕೆ ಜೋಳ ಬೆಳೆ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಹಲವು ಕಡೆ ಕರೆಂಟ್ ಇಲ್ಲ
ಗಾಳಿ, ಮಳೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳಿ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಕಂಬಗಳು, ತಂತಿಗಳ ಮೇಲೆ ಬದ್ದಿವೆ. ಇದರಿಂದ ಹಲವು ಕಡೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತವಾಗಿದೆ. ಸುರಿವ ಮಳೆಯಲ್ಲಿಯು ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾತ್ರಿ ಇಡೀ ಮಳೆ, ಗುಡುಗು, ಮಿಂಚಿನ ಆರ್ಭಟ, ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಮಳೆಯಾಗುತ್ತಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200