SHIMOGA : ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ಕೇಬಲ್ ಕಾಮಗಾರಿ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಜನ, ಜಾನುವಾರುಗಳ ಜೀವದ ಜೊತೆ ಚೆಲ್ಲಾಟ ಆಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಯುಜಿ ಕೇಬಲ್ ಕಾಮಗಾರಿ ವಿರುದ್ಧ ಪಾಲಿಕೆ ಸದಸ್ಯರು ಗರಂ ಆದರು. ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಯುಜಿ ಕೇಬಲ್ ಕಾಮಗಾರಿ ಫೋಟೊಗಳನ್ನು ಪ್ರದರ್ಶಿಸಿ ವಿಷಯ ಪ್ರಸ್ತಾಪಿಸಿದರು. ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡುವ ವಾರ್ಡ್ಗಳ ಸರ್ವ ಪಕ್ಷದ ಪಾಲಿಕೆ ಸದಸ್ಯರು ಧ್ವನಿಗೂಡಿಸಿದರು.
ಯಾರೆಲ್ಲ ಏನೇನು ಹೇಳಿದರು?
ಸ್ಮಾರ್ಟ್ ಸಿಟಿ ಯೋಜನೆಯ ಯುಜಿ ಕೇಬಲ್ ಕಾಮಗಾರಿ ಜನರಲ್ಲಿ ತೀವ್ರ ಆತಂಕ ಮೂಡಿಸುತ್ತಿದೆ. ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಜೀವ ಭಯದಲ್ಲಿದ್ದಾರೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸದೆ ಇದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಲಿದೆ.ರೇಖಾ ರಂಗನಾಥ್, ಪಾಲಿಕೆ ವಿರೋಧ ಪಕ್ಷದ ನಾಯಕಿ
ಫುಟ್ ಪಾತ್ಗಳಲ್ಲಿ ಶಾರ್ಟ್ ಸರ್ಕಿಟ್ ಆಗುತ್ತಿದೆ. ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಹಾನಿಯಾಗಿವೆ. ಈ ಕುರಿತು ಮೆಸ್ಕಾಂಗೆ ವಿಚಾರಿಸಿದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೇಲೆ ಹೊಣೆ ಹೊರಿಸುತ್ತಾರೆ. ಸ್ಮಾರ್ಟ್ ಸಿಟಿಯವರು ಮೆಸ್ಕಾಂ ವಿರುದ್ಧ ಆರೋಪಿಸುತ್ತಾರೆ. ಒಂದು ಮೀಟರ್ ಕೆಳಗೆ ಭೂಗತವಾಗಿ ಕೇಬಲ್ ಅಳವಡಿಸಬೇಕು. ಆದರೆ ಕೇವಲ ಎರಡು ಅಡಿಗೆ ಕೇಬಲ್ ಹಾಕಲಾಗಿದೆ.ನಾಗರಾಜ ಕಂಕಾರಿ, ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯ
ಭೂಗತ ಕೇಬಲ್ನಿಂದ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗುತ್ತದೆ ಎಂದಿದ್ದರು. ಈಗ ಫೀಡರ್ ಬಾಕ್ಸ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಯುಜಿ ಕೇಬಲ್ ಹಾಳಾಗಿದ್ದರಿಂದ ಕಂಬಗಳಿಂದಲೇ ಮನೆಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿವೆ. ಅವುಗಳನ್ನು ಪಾಲಿಕೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಬೇಕಿದೆ. ಆದರೆ ಯಾವುದೆ ಕಾರಣಕ್ಕೂ ಆ ಕಾಮಗಾರಿಗಳು ಪಾಲಿಕೆಗೆ ಹಸ್ತಾಂತರ ಆಗಬಾರದು.ರಮೇಶ್ ಹೆಗ್ಡೆ, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ
ಎಲ್ಲೆಂದರಲ್ಲಿ ಯುಜಿಡಿ ಬ್ಲಾಕ್ ಆಗುತ್ತಿದೆ. ಡ್ರೈನೇಜ್ಗಳ ಅಗಲ ಮೊದಲಿಗಿಂತಲೂ ಚಿಕ್ಕದಾಗಿದೆ. ಯುಜಿ ಕೇಬಲ್ಗಳು ಶಾರ್ಟ್ ಸರ್ಕಿಟ್ ಆಗುತ್ತಿವೆ. ನಮ್ಮ ವಾರ್ಡ್ನ ಕೆಲವು ಬೀದಿಗಳಲ್ಲಿ ಲೈಟ್ ಕಂಬಗಳನ್ನೇ ಅಳವಡಿಸಿಲ್ಲ. ಇದರಿಂದ ಕತ್ತಲು ಆವರಿಸಿದೆ.ಸುವರ್ಣಾ ಶಂಕರ್, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯೆ
ನಮ್ಮ 12ನೇ ವಾರ್ಡ್ ಸಂಪೂರ್ಣ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡಲಿದೆ. ಈಗಾಗಲೇ ಯೋಜನೆ ಪೂರ್ಣಗೊಂಡಿದೆ. ಆದರೆ ಒಂದೇ ಒಂದು ಬೀದಿಯನ್ನೂ ಮಾದರಿ ಬೀದಿ ಎಂದು ಹೇಳಲು ಆಗುತ್ತಿಲ್ಲ. ಕಾಮಗಾರಿಗಳು ಅಪೂರ್ಣವಾಗಿವೆ. 13 ಕನ್ಸರ್ವೆನ್ಸಿಯಲ್ಲಿ 8 ಮಾತ್ರ ಅಭಿವೃದ್ಧಿಯಾಗಿದೆ. ನಿರ್ವಹಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಜನಪ್ರತಿನಿಧಿಗಳಾಗಿ ಜನರಿಗೆ ಉತ್ತರ ನೀಡಲಾಗದ ಅಸಹಾಯಕತೆ ಉಂಟಾಗಿದೆ.ಸುರೇಖಾ ಮುರಳೀಧರ್, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯೆ
ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ಪಾಲಿಕೆ ಸದಸ್ಯರ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೆವು. ಆಗ ಒಂದೇ ಒಂದು ಸಭೆ ಕರೆಯಲಾಗಿತ್ತು. ಆಮೇಲೆ ಒಂದೇ ಒಂದು ಸಭೆ ನಡೆದಿಲ್ಲ. ಈಗ ಕಾಮಗಾರಿ ಮಗಿದಿದೆ. ಪ್ರತಿ ರಸ್ತೆಯನ್ನು ಪಾಲಿಕೆಗೆ ಹ್ಯಾಂಡ್ ಓವರ್ ಮಾಡುವ ಸಂದರ್ಭ ನಾಗರಿಕ ಸಮಿತಿ, ಪಾಲಿಕೆ ಸದಸ್ಯರು, ನಾಗರಿಕರ ಒಪ್ಪಿಗೆ ಪಡೆದು ನಂತರ ಮುಂದುವರೆಯಬೇಕಿದೆ.ಹೆಚ್.ಸಿ.ಯೋಗೇಶ್, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ
ಸಭೆ ನಡೆಸಿ ಸಮಸ್ಯೆ ಪರಿಹಾರ
ಪಾಲಿಕೆ ಸದಸ್ಯರ ಅಭಿಪ್ರಾಯ ಕೇಳಿದ ಬಳಿಕ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಜು.27ರಂದು ಸ್ಮಾರ್ಟ್ ಸಿಟಿ ಗೌರ್ನಿಂಗ್ ಕಮಿಟಿ ಸಭೆ ನಡೆಯಲಿದೆ. ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಈ ವೇಳೆ ಸಮಸ್ಯೆಗಳ ಕುರಿತ ಪ್ರಸ್ತಾಪಿಸುತ್ತೇನೆ. ಈಗಾಗಲೆ ಸ್ಮಾರ್ಟ್ ಸಿಟಿ ಯೋಜನೆಯ ಶೇ.98ರಷ್ಟು ಕೆಲಸ ಪೂರ್ಣಗೊಂಡಿದೆ. ಶೇ.50ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಹೊಸ ಕೆಲಸಗಳಿಗೆ ಅನುದಾನವಿಲ್ಲ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆಗಸ್ಟ್ 3ರಂದು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ಪಾಲಿಕೆ ಸದಸ್ಯರು, ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಜೂನ್ವರೆಗೆ ಯೋಜನೆ ಅವಧಿ ವಿಸ್ತರಣೆ ಮಾಡಲಾಗಿದೆ. ಅಷ್ಟರಲ್ಲಿ ಸಮಸ್ಯೆಗಳ ಪರಿಹಾರ ಮಾಡಲು ಕಾರ್ಯಪ್ರವೃತ್ತರಾಗೋಣ ಎಂದು ತಿಳಿಸಿದರು.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ