ಶಿವಮೊಗ್ಗ : ನಕಲಿ ಚಿನ್ನ ಅಡಮಾನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶಿವಮೊಗ್ಗದ ವಿವಿಧೆಡೆ ದಾಳಿ ನಡೆಸಿದೆ. ಇನ್ನೊಂದೆಡೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
ಏನಿದು ಕೇಸ್?
2014 – 15ರಲ್ಲಿ ಶಿವಮೊಗ್ಗದ DCC ಬ್ಯಾಂಕ್ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ರೂ. ಸಾಲ ಪಡೆಯಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣ ಸಂಬಂಧ ಇ.ಡಿ ತನಿಖೆ ನಡೆಸುತ್ತಿದೆ. ಇವತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಾಳಿಯಾಗಿದೆ?
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಗರಣ ನಡೆದ ಸಂದರ್ಭ ಡಿಸಿಸಿ ಬ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ » ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ ರ್ಯಾಂಕ್, ಇಲ್ಲಿದೆ ಫಟಾಫಟ್ ಸಂದರ್ಶನ
ಶಿವಮೊಗ್ಗದ ಗೋಪಾಳದಲ್ಲಿ ಶೋಭಾ ಅವರ ಮನೆ ಮೇಲೆ ದಾಳಿಯಾಗಿದೆ. ಬೆಂಗಳೂರಿನಿಂದ ಮೂರು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿರುವ ಎಂಟು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಶೋಭಾ ಡಿಸಿಸಿ ಬ್ಯಾಂಕ್ನ ನಗರ ಶಾಖೆಯ ವ್ಯವಸ್ಥಾಪಕಿಯಾಗಿದ್ದರು.

ಇದನ್ನೂ ಓದಿ » ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶಿವಮೊಗ್ಗ ಜಿಲ್ಲೆಗೆ ಎಷ್ಟನೆ ಸ್ಥಾನ? ಇಲ್ಲಿದೆ ರಿಸಲ್ಟ್ ಹೈಲೈಟ್ಸ್
ಜಿಲ್ಲೆಯ ವಿವಿಧೆಡೆ ದಾಳಿಯಾಗಿರುವ ವರದಿಯಾಗಿದೆ. ಕಾಮಾಕ್ಷಿ ಬೀದಿ, ಕುಂಸಿ, ಕೂಡ್ಲಿ ಸೇರಿದಂತೆ ಸುಮಾರು 8ಕ್ಕೂ ಅಧಿಕ ಕಡೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ.
ಮಂಜುನಾಥ ಗೌಡ ವಿಚಾರಣೆ

ಇನ್ನು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಅಪೆಕ್ಸ್ ಬ್ಯಾಂಕ್ನ ಅತಿಥಿ ಗೃಹದಲ್ಲಿ ಮಂಜುನಾಥ ಗೌಡ ಅವರ ವಿಚಾರಣೆ ನಡೆಸಲಾಗುತ್ತಿದೆ. ನಕಲಿ ಬಂಗಾರ ಅಡಮಾನ ಪ್ರಕರಣ ನಡೆದ ಸಂದರ್ಭ ಮಂಜುನಾಥ ಗೌಡ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿದ್ದರು.
ಆರ್.ಎಂ.ಮಂಜುನಾಥಗೌಡಗೆ ಇ.ಡಿ. ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು. ಈಚೆಗೆ ದ್ವಿಸದಸ್ಯ ಪೀಠವು ಮಂಜುನಾಥ ಗೌಡ ಅರ್ಜಿಯನ್ನು ವಜಾಗೊಳಿಸಿತ್ತು.