ಶಿವಮೊಗ್ಗ: ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೇ ರಾಜ್ಯದ ಇತರೆ ನಗರಗಳಿಗೂ ಕೈಗಾರಿಕಾ ಅಭಿವೃದ್ಧಿ ವಿಸ್ತರಿಸಬೇಕು. ಶಿವಮೊಗ್ಗವನ್ನು ಕೈಗಾರಿಕಾ ಅಭಿವೃದ್ಧಿ ನಗರವನ್ನಾಗಿ ಪರಿಗಣಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಒತ್ತಾಯಿಸಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಬೆಂಗಳೂರಿನಾಚೆಗಿನ ಕೈಗಾರಿಕಾ ಅಭಿವೃದ್ಧಿಗೆ ಗುರುತಿಸಿರುವ ಐದು ನಗರಗಳಲ್ಲಿ ಶಿವಮೊಗ್ಗವೂ ಒಂದಾಗಬೇಕು. ವಿಮಾನ ನಿಲ್ದಾಣ, ರೈಲು ಮತ್ತು ರಸ್ತೆ ಸಂಪರ್ಕ ಹಾಗೂ ಶೈಕ್ಷಣಿಕ ಮೂಲಾಧಾರವನ್ನು ಹೊಂದಿದೆ ಎಂದರು.

ಫೌಂಡ್ರಿ ಉದ್ಯಮ, ಆಹಾರ ಸಂಸ್ಕರಣೆ ಘಟಕ, ಶಿಮುಲ್, ಜವಳಿ ಸೇರಿ ಹಲವು ಉತ್ಪಾದನಾ ಘಟಕಗಳು ಇಲ್ಲಿವೆ. ಶಿವಮೊಗ್ಗವನ್ನು ಅಡಿಕೆ ಪ್ರಧಾನ ಜಿಲ್ಲೆಯ ಉತ್ಪಾದನಾ ಕೇಂದ್ರವಾಗಿ ಹಾಗೂ ಕೈಗಾರಿಕಾ ಆಧಾರಿತ ಉದಯೋನ್ಮುಖ ಕ್ಲಸ್ಟರ್ ಆಗಿ ರೂಪಿಸಬೇಕಿದೆ ಎಂದು ತಿಳಿಸಿದರು.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಸರ್ಕಾರದ ಮಟ್ಟದಲ್ಲಿ ಬಹುಕಂಪನಿಗಳೊಂದಿಗೆ ಚರ್ಚೆ ನಡೆಯಬೇಕು. ಶಿವಮೊಗ್ಗವನ್ನು ಐಟಿ ಸೇವೆಗಳ ರಫ್ತು ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
– ಬಿ.ಗೋಪಿನಾಥ್, ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಡಾ. ಲಕ್ಷ್ಮೀದೇವಿ ಗೋಪಿನಾಥ್, ಎಸ್.ಪಿ.ಶಂಕರ್, ಬಿ.ಸುರೇಶ್ ಕುಮಾರ್, ರವಿಪ್ರಕಾಶ್ ಜೆನ್ನಿ, ಗಣೇಶ್ ಅಂಗಡಿ, ಕೆ.ಬಿ.ಶಿವಕುಮಾರ್, ಎಸ್.ಎಸ್.ಉದಯ್ ಕುಮಾರ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಎಲ್.ಚಂದ್ರಶೇಖರ್, ಜಿಲ್ಲಾ ಔಷಧಿ ವರ್ತಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್, ಸಾಗರ ರಸ್ತೆ ಕೈಗಾರಿಕಾ ಸಂಘದ ಕಾರ್ಯದರ್ಶಿ ನಾಗೇಶ್, ಮಂಡ್ಲಿ ಕಲ್ಲೂರ್ ಕೈಗಾರಿಕಾ ಸಂಘದ ಪದಾಧಿಕಾರಿಗಳು, ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕಿರಣ್, ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಜವಳಿ ವರ್ತಕರ ಸಂಘದ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.