ಶಿವಮೊಗ್ಗ: ನಂಜಪ್ಪ ಆಸ್ಪತ್ರೆ ಸಿಬ್ಬಂದಿಯೊಬ್ಬರ ಮೊಬೈಲ್ (Mobile) ಕಸಿದುಕೊಂಡ ಮಂಗವೊಂದು ಮರ ಹತ್ತಿ ಕುಳಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಸುಮಾರು ಒಂದು ಗಂಟೆಯ ಪ್ರಹಸನದ ಬಳಿಕ ಮಂಗ ಮೊಬೈಲ್ ಬಿಟ್ಟು ಪರಾರಿಯಾಗಿದೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಆಸ್ಪತ್ರೆ ಸಿಬ್ಬಂದಿ ರೇಷ್ಮಾ ಎಂಬುವವರಿಗೆ ಸೇರಿದ ಮೊಬೈಲ್ ಎತ್ತಿಕೊಂಡು ಪರಾರಿಯಾಗಿತ್ತು.
ಮೊಬೈಲ್ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಜನರ ಕುತೂಹಲ ಮೂಡಿಸಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಬಹು ಹೊತ್ತು ಕುಳಿತುಕೊಂಡಿತ್ತು. ಆಗಾಗ ಮೊಬೈಲನ್ನು ಎದೆಗವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್ ಕಿವಿಗೆ ಹಿಡಿದು ಕುಳಿತಿತ್ತು.
ಮೊಬೈಲ್ ಹಿಡಿದು ಮರವೇರಿದ್ದ ಮಂಗದ ಹಾವಾಭಾವ ಗಮನಿಸಲು ದೊಡ್ಡ ಸಂಖ್ಯೆಯ ಜನರು ರಸ್ತೆ ಬದಿ ನಿಂತಿದ್ದರು. ಮಂಗದ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯ ಸೆರೆ ಹಿಡಿಯುತ್ತಿದ್ದರು. ಸವಾರರು ಮಂಗಾಟ ಗಮನಿಸಲು ವಾಹನ ನಿಲ್ಲಿಸುತ್ತಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.
ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿಗೆ ಮಂಗಕ್ಕೆ ಬಾಳೆ ಹಣ್ಣು ತೋರಿಸಿ ಗಮನ ಸೆಳೆದರು. ಆಸೆಯಿಂದ ಕಟ್ಟಡದ ಮೇಲೆ ಬಂದು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆ ಹಣ್ಣು ಎತ್ತಿಕೊಂಡು, ಮೊಬೈಲ್ ಬಿಟ್ಟು ಮಂಗ ಪರಾರಿಯಾಯಿತು.
ಇದನ್ನೂ ಓದಿ » ಚಂದ್ರಗುತ್ತಿ ಹೋಬಳಿ, ಶ್ವಾನಗಳ ದಾಳಿಗೆ ಜಿಂಕೆ ಬಲಿ

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200