ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದ ನೀರಾನೆ ಹಂಸಿಣಿಯ ಮರಣೋತ್ತರ ಪರೀಕ್ಷೆ (post mortem) ಪೂರ್ಣಗೊಂಡಿದೆ. ಸಾವಿಗೆ ಪ್ರಾಥಮಿಕ ಕಾರಣಗಳು ತಿಳಿದುಬಂದಿವೆ ಎಂದು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿಯಲ್ಲಿ ಏನೇನಿದೆ?
ಮರಣೋತ್ತರ ಪರೀಕ್ಷೆಯ ಪ್ರಕಾರ, ಹಂಸಿಣಿಗೆ ತೀವ್ರವಾದ ಯಕೃತ್ತಿನ ಸೋಂಕು ಉಂಟಾಗಿತ್ತು. ಈ ಸೋಂಕು ದೇಹದ ಅನೇಕ ಅಂಗಾಂಗಗಳಿಗೆ ವ್ಯಾಪಿಸಿ ‘ಸಿಸ್ಟಮಿಕ್ ಇನ್ಫೆಕ್ಷನ್’ ಆಗಿ ಪರಿಣಮಿಸಿದ್ದು ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದಲ್ಲದೆ, ಯೋನಿ ಮತ್ತು ಗರ್ಭಾಶಯದ ಬಾಯಿ ಭಾಗದಲ್ಲೂ ಸ್ಥಳೀಯವಾಗಿ ಸೋಂಕು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಗರ್ಭದಲ್ಲೇ ಮೃತಪಟ್ಟ ಭ್ರೂಣ
ಹಂಸಿಣಿ ಗರ್ಭಿಣಿಯಾಗಿದ್ದು, ಇನ್ನು ಕೆಲವು ವಾರಗಳಲ್ಲಿ ಮರಿಗೆ ಜನ್ಮ ನೀಡುವ ಹಂತದಲ್ಲಿದ್ದಳು ಎಂದು ಊಹಿಸಲಾಗಿದೆ. ಆದರೆ ಹಂಸಿಣಿಯ ಮರಣದ ಬೆನ್ನಲ್ಲೇ ಗರ್ಭದಲ್ಲಿದ್ದ ಗಂಡು ಭ್ರೂಣವೂ ಸಹ ಮೃತಪಟ್ಟಿದೆ. ಸೋಂಕಿನ ನಿಖರ ಕಾರಣ ಪತ್ತೆಹಚ್ಚಲು ದೇಹದ ದ್ರವಗಳು ಮತ್ತು ಟಿಶ್ಯೂಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಮರಾಕ್ಷರ ಸ್ಪಷ್ಟಪಡಿಸಿದ್ದಾರೆ.

ಕೊನೆ ಕ್ಷಣದ ವಿಡಿಯೋ ರಿಲೀಸ್
ಹಂಸಿಣಿ ನೀರಾನೆಯ ಕೊನೆಕ್ಷಣದ ಸಿಸಿಟಿವಿ ದೃಶ್ಯಾವಳಿಯನ್ನು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಬಿಡುಗಡೆ ಮಾಡಿದ್ದಾರೆ. ಕೊನೆಯುಸಿರೆಳೆಯುವ ಕೆಲವೇ ಹೊತ್ತಿಗೆ ಮುನ್ನ ಹಂಸಿಣಿ ನೀರಾನೆಯು, ತನ್ನ ಜಾಗದಲ್ಲಿ ಓಡಾಡಿತ್ತು. ಬಳಿಕ ನೀರಿನ ಕೊಳದಲ್ಲಿ ಹೋಗಿ ಮಲಗಿತ್ತು. ಏ.14ರಂದು ಮಧ್ಯಾಹ್ನ 3:08ಕ್ಕೆ ಅಲ್ಲಿಯೇ ಕೊನೆಯುಸಿರೆಳೆದಿದೆ ಎಂದು ತಿಳಿಸಿದ್ದಾರೆ.

About The Editor
ನಿತಿನ್ ಆರ್.ಕೈದೊಟ್ಲು






