ಶಿವಮೊಗ್ಗದಲ್ಲಿ ಆಂಬುಲೆನ್ಸ್ ದಾದಾಗಿರಿಗೆ ಬ್ರೇಕ್, ಹೆಚ್ಚು ವಸೂಲಿಗಿಳಿದರೆ ಗಾಡಿ ಸೀಜ್, ಕಿ.ಮೀ ಲೆಕ್ಕದಲ್ಲಿ ರೇಟ್ ಫಿಕ್ಸ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MAY 2021

ಮೆಗ್ಗಾನ್ ಆಸ್ಪತ್ರೆಯಲ್ಲಿ ‘ಆಂಬುಲೆನ್ಸ್ ದಾದಾಗಿರಿ’ ವಿರುದ್ಧ ಜಿಲ್ಲಾಡಳಿತ ಕಠಿಣ ಹೆಜ್ಜೆ ಇರಿಸಿದೆ. ಜನಪ್ರತಿನಿಧಿಗಳ ಗಂಭೀರ ಆರೋಪ, ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಬೆನ್ನಿಗೆ, ಆಂಬುಲೆನ್ಸ್‍ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಮುಂದೆ ಕರೋನ ಸೋಂಕಿತರ ಮೃತದೇಹಗಳನ್ನು ಕೊಂಡೊಯ್ಯಲು ದುಬಾರಿ ದರ ವಿಧಿಸುತ್ತಿರುವ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಂಬುಲೆನ್ಸ್‍ ದಾದಾಗಿರಿ ಎಂದು ಬಣ್ಣಿಸಿದ್ದರು. ಈ ಬೆನ್ನಿಗೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈಗ ಮೆಗ್ಗಾನ್ ಆಸ್ಪತ್ರೆ ಶವಾಗಾರದ ಮುಂದೆ ಮೊದಲಿನಂತಿಲ್ಲ. ಜಿಲ್ಲಾಡಳಿತ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚಿಗೆ ದರ ವಿಧಿಸಿದರೆ ಆಂಬುಲೆನ್ಸನ್ನೆ ವಶಕ್ಕೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಏನೆಲ್ಲ ವ್ಯವಸ್ಥೆ ಮಾಡಲಾಗಿದೆ?

ಮೃತದೇಹಗಳನ್ನು ಸಾಗಿಸಲು ಆಂಬುಲೆನ್ಸ್‍ನವರು ದುಬಾರಿ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪವಿತ್ತು. ಇದಕ್ಕೆ ಬ್ರೇಕ್ ಹಾಕಲು ಆಂಬುಲೆನ್ಸ್ ಸಹಾಯವಾಣಿ ಆರಂಭಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.

ಆಂಬುಲೆನ್ಸ್‍ಗೆ ಪ್ರತಿ ಕಿಲೋ ಮೀಟರ್‍ಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ. ಟೆಂಪೊ ಟ್ರಾವೆಲರ್‍ ಆಂಬುಲೆನ್ಸ್‍ಗೆ ಪ್ರತಿ ಕಿ.ಮೀ.ಗೆ 16 ರೂ. ಚಾಲಕನಿಗೆ 300 ರೂ. ನಿಗದಿಪಡಿಸಲಾಗಿದೆ. ಓಮ್ನಿ ಆಂಬುಲೆನ್ಸ್‍ಗೆ ಪ್ರತಿ ಕಿ.ಮೀ.ಗೆ 11 ರೂ. ಚಾಲಕನಿಗೆ 300 ರೂ. ಕ್ರೂಜರ್ ಆಂಬುಲೆನ್ಸ್‍ಗೆ ಪ್ರತಿ ಕಿ.ಮೀ.ಗೆ 13 ರೂ. ಚಾಲಕನಿಗೆ 300 ರೂ. ಎಂದು ನಿಗದಿಪಡಿಸಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೃತದೇಹ ಸಾಗಿಸಲು ಎಲ್ಲಾ ತರಹದ ವಾಹನಗಳಿಗೆ ಸಾವಿರ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ವಾಹನ ಚಾಲಕನ ದರ, ಪಿಪಿಇ ಕಿಟ್‍ ಕೂಡ ಒಳಗೊಂಡಿರುತ್ತದೆ.

ಇನ್ನು, ಆಂಬುಲೆನ್ಸ್‍ನವರು ನಿಗದಿಗಿಂತಲೂ ಹೆಚ್ಚಿನ ಹಣ ವಸೂಲು ಮಾಡುವುದನ್ನು ತಡೆಯಲು ಶವಾಗಾರದ ಬಳಿಕ ಆರ್‍ಟಿಒ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಆಂಬುಲೆನ್ಸ್ ಸರತಿ ಸಾಲಿನಲ್ಲಿ ಬಂದು ತಮ್ಮ ಪಾಳಿಯಲ್ಲಿ ಮೃತದೇಹಗಳನ್ನು ಕೊಂಡೊಯ್ಯುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಮೆಗ್ಗಾನ್ ಆಸ್ಪತ್ರೆಯಲ್ಲಿ ಆಂಬುಲೆನ್ಸ್‍ಗಳು ಬಾಯಿಗೆ ಬಂದಂತೆ ಹಣ ವಸೂಲಿ ಮಾಡುತ್ತಿರುವ ದೂರು ಬಂದಿತ್ತು. ಆಂಬಯಲೆನ್ಸ್‍ನವರ ದಾದಾಗಿರಿ ತಡೆಯೋಕೆ ಪ್ರೀಪೇಯ್ಡ್ ವ್ಯವಸ್ಥೆ ಮಾಡಿದ್ದೇವೆ. ದರ ನಿಗದಿಪಡಿಸಲಾಗಿದ್ದು, ಅದೆ ದರವನ್ನು ಪಡೆಯಬೇಕು. ಹೆಚ್ಚು ಹಣ ಪಡೆದದ್ದು ಗೊತ್ತಾದರೆ ಗಾಡಿಯನ್ನೇ ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡುತ್ತೇವೆ ಎಂದರು.

ಆಂಬುಲೆನ್ಸ್ ದಾದಾಗಿರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ತಮ್ಮವರನ್ನ ಕಳೆದುಕೊಂಡ ದುಃಖದ ನಡುವೆ ಆಂಬುಲೆನ್ಸ್‍ಗಳ ದುಬಾರಿ ದರದ ಭೀತಿಯಲ್ಲಿದ್ದವರು ನಿಟ್ಟುಸಿರು ಬಿಡುವಂತಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment