ಶಿವಮೊಗ್ಗ: ಐಪಿಎಲ್ ಪಂದ್ಯಾವಳಿಯ ಫೈನಲ್ನಲ್ಲಿ ಆರ್ಸಿಬಿ ತಂಡ ಎರಡನೇ ಬಾರಿ ಕಪ್ ಗೆದ್ದಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಬೀದಿಗಿಳಿದ ಯುವಕರು ಸಂಭ್ರಮಾಚರಣೆ ನಡೆಸಿದರು.
ಐಪಿಎಲ್ ಪಂದ್ಯಾವಳಿಯಲ್ಲಿ ಈ ಬಾರಿಯು ರಾಯಲ್ ಚಾಲೆಂಜರ್ಸ್ ತಂಡ ಕಪ್ ಗೆದ್ದಿದೆ. ವಿರಾಟ್ ಕೊಹ್ಲಿ ಕೊನೆಯ ಎರಡು ಬೌಂಡರಿಗಳನ್ನು ಸಿಡಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಆರಂಭವಾಯಿತು. ನಗರದಾದ್ಯಂತ ಪಟಾಕಿಗಳನ್ನು ಸಿಡಿಸಿ ಖುಷಿಪಟ್ಟರು.

ಬೈಕ್ ಜಾಥಾ, ಘೋಷಣೆ, ಕೂಗಾಟ
ಯುವಕರು ಬೈಕುಗಳಲ್ಲಿ ನಗರದಾದ್ಯಂತ ಜಾಥಾ ನಡೆಸಿದರು. ಪ್ರಮುಖ ರಸ್ತೆಗಳಾದ ಬಿ.ಹೆಚ್.ರಸ್ತೆ, ನೆಹರು ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ, ಕುವೆಂಪು ರೋಡ್, ಜೈಲ್ ರೋಡ್, ವಿನೋಬನಗರ ರಸ್ತೆ, 100 ಅಡಿ ರಸ್ತೆಗಳಲ್ಲಿ ಯುವಕರು ಬೈಕ್ ಜಾಥಾ ನಡೆಸಿದರು. ಆರ್ಸಿಬಿ ಧ್ವಜ ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು
ರಾತ್ರಿ 12 ಗಂಟೆ ಹೊತ್ತಿಗೆ ಪಟಾಕಿ ಸಿಡಿಸಿ ಯುವಕರು ಖುಷಿಪಟ್ಟರು. ವಿವಿಧೆಡೆ ಪಟಾಕಿಗಳನ್ನು ಸಿಡಿಸುತ್ತಲೆ ಯುವಕರು ಕುಣಿದು ಕುಪ್ಪಳಿಸಿದರು.

ದೊಡ್ಡ ಪರದೆಗಳಲ್ಲಿ ಮ್ಯಾಚ್ ವೀಕ್ಷಣ
ಶಿವಮೊಗ್ಗದ ಮಂಜುನಾಥ ಚಿತ್ರಮಂದಿರದಲ್ಲಿ ದೊಡ್ಡ ಪರದೆಯಲ್ಲಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯ ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ದೊಡ್ಡ ಪರದೆಯ ಮುಂಭಾಗ ವೇದಿಕೆ ಏರಿ ಸಂಭ್ರಮಿಸಿದರು. ನಗರದ ಹಲವು ಕ್ಲಬ್ಗಳು, ಬಾರ್ಗಳಲ್ಲಿಯು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

