ಶಿವಮೊಗ್ಗ: ಶಂಕರಾಚಾರ್ಯರು (Shankaracharya) ಅದ್ವೈತ ತತ್ವ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಈ ದೇಶವನ್ನು ಜೋಡಿಸುವ ಹಾಗೂ ಸನಾತನ ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ : ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ, ಪ್ರಮಾಣ ಪತ್ರ ಕುರಿತು ಮಹತ್ವದ ಪ್ರಕಟಣೆ
ಪರಬ್ರಹ್ಮನೊಬ್ಬನೇ ಶಾಶ್ವತ ಮತ್ತು ಪರಮ ಸತ್ಯವೆಂದು ಸಾರಿದ ಶಂಕರಾಚಾರ್ಯರು ಈ ದೇಶವನ್ನು ಕಟ್ಟುವುದಕ್ಕಾಗಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಸಾಂಸ್ಕೃತಿಕ ರಾಷ್ಟ್ರವನ್ನಾಗಿಸಿದರು. ಪ್ರತಿ ಹಂತದಲ್ಲೂ ಸಮಾಜದ ಸಂಸ್ಕೃತಿಯನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ನಾನೇ ಶ್ರೇಷ್ಠವೆಂದು ಹೇಳುವ ಯಾವುದೇ ಸಂಗತಿಯನ್ನು ಅವರು ಹೇಳಲಿಲ್ಲ. ಬದಲಾಗಿ ಎಲ್ಲವನ್ನು ಪೂರಕವಾಗಿ ಜೋಡಿಸಿಕೊಂಡು ಮುಂದಕ್ಕೆ ತೆಗೆದುಕೊಂಡು ಹೋಗುವು ದನ್ನು ತಿಳಿಸಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಶಿವಮೊಗ್ಗದ ನಿವೃತ್ತ ಸಂಸ್ಕೃತ ಉಪನ್ಯಾಸಕ ಎ.ಎಸ್. ಕೃಷ್ಣಮೂರ್ತಿ, ಶಂಕರಾಚಾರ್ಯರೆಂದರೆ ಒಂದು ಆಲಯ. ಅದರ ಇನ್ನೊಂದು ಅರ್ಥ ಸಮನ್ವಯ ಎಂಬುದಾಗಿದೆ. ಕಲಿಯುಗದಲ್ಲಿ ಜಗತ್ತಿನ ದುಃಖವನ್ನು ಹೋಗಲಾಡಿಸಲು ಪ್ರಮುಖ ಪಾತ್ರವಹಿಸಿದ ಇವರು ಯಾವುದೇ ಪ್ರತಿಫಲ ಅಪೇಕ್ಷಿಸದೇ ಭಾರತದ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಅವರ ವಿಚಾರ ಧಾರೆಗಳು ಹಾಗೂ ಜ್ಞಾನ ಪ್ರಸಾದವನ್ನು ಹಂಚಿ, ಅಜ್ಞಾನವನ್ನು ಹೋಗಲಾಡಿಸಿದರು ಎಂದು ಹೇಳಿದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಮಾಲತೇಶ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್, ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸುರೇಶ್ ರಾವ್ ನಾಡಿಗ್, ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಪಿ. ನಾರಾಯಣ್, ಅನುಪಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.






