ಶಿವಮೊಗ್ಗ : ನಗರದಲ್ಲಿ ಮತ್ತೆರಡು ಇಂದಿರಾ ಕ್ಯಾಂಟೀನ್ (Indira Canteen) ಸ್ಥಾಪನೆಯಾಗುತ್ತಿವೆ. ಈಗಾಗಲೇ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲವೆ ದಿನದಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಇಂದಿರಾ ಕ್ಯಾಂಟೀನ್ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಲಿದೆ.
ಎಲ್ಲೆಲ್ಲಿ ಸ್ಥಾಪನೆಯಾಗುತ್ತಿದೆ ಕ್ಯಾಂಟೀನ್?
ಶಿವಮೊಗ್ಗದ ವಿದ್ಯಾನಗರ ಮತ್ತು ನೇತಾಜಿ ವೃತ್ತದಲ್ಲಿ ಮಹಾನಗರ ಪಾಲಿಕೆಯ ಜಾಗದಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಕ್ಯಾಂಟೀನ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನು ಕೆಲವೇ ದಿನದಲ್ಲಿ ಇಂದಿರಾ ಕ್ಯಾಂಟೀನ್ಗಳು ಆರಂಭವಾಗಲಿವೆ.

ಇಲ್ಲೇ ಏಕೆ ಇಂದಿರಾ ಕ್ಯಾಂಟೀನ್? ಜಾಸ್ತಿ ಜನ ಸಂಚಾರ, ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತದೆ. ವಿದ್ಯಾನಗರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಅಲ್ಲದೆ ಈಗ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಸ್ಲಂ ಇದೆ. ಅಲ್ಲದೆ ಬಡವರು, ಕೂಲಿ ಕಾರ್ಮಿಕರು ಹಚ್ಚು ಸಂಚರಿಸುತ್ತಾರೆ ಇದೆ ಕಾರಣಕ್ಕೆ ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುತ್ತಿದೆ. ಇನ್ನು, ನೇತಾಜಿ ಸರ್ಕಲ್ನಲ್ಲಿ ಕ್ಯಾಂಟೀನ್ ನಿರ್ಮಾಣವಾಗುತ್ತಿರುವ ಪ್ರದೇಶದ ಸುತ್ತಮುತ್ತ ಕಾರ್ಮಿಕರ ಸಂಖ್ಯೆ ಹೆಚ್ಚು. ನಿತ್ಯ ಬಂದು ಹೋಗುವವರ ಸಂಖ್ಯೆಯು ಅಧಿಕ. ಆದ್ದರಿಂದ ಇಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.

ಇಂದಿರಾ ಕ್ಯಾಂಟೀನ್ ಸಂಖ್ಯೆ ಆರಕ್ಕೆ
ಶಿವಮೊಗ್ಗ ನಗರದಲ್ಲಿ ಈಗಾಗಲೇ ನಾಲ್ಕು ಇಂದಿರಾ ಕ್ಯಾಂಟೀನ್ಗಳಿವೆ. ವಿನೋಬನಗರ ಶಿವಾಲಯದ ಬಳಿ ಮೊದಲ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿತ್ತು. ಆ ಬಳಿಕ ಖಾಸಗಿ ಬಸ್ ನಿಲ್ದಾಣ, ಡಿಡಿಪಿಐ ಕಚೇರಿ ಆವರಣ, ಎಪಿಎಂಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗಿತ್ತು. ಈಗ ಮತ್ತೆರಡು ಇಂದಿರಾ ಕ್ಯಾಂಟೀನ್ಗಳು ಆರಂಭ ಆಗುತ್ತಿರುವುದರಿಂದ ನಗರದಲ್ಲಿ ಇಂದಿರಾ ಕ್ಯಾಂಟೀನ್ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಕಡಿಮೆ ದರದಲ್ಲಿ ಉತ್ತಮ ಆಹಾರ ನೀಡುವುದು ನಮ್ಮ ಉದ್ದೇಶ. ಕೂಲಿ ಕಾರ್ಮಿಕರು, ಹೆಚ್ಚು ಜನ ಸಂಚಾರವಿರುವ ವಿದ್ಯಾನಗರ ಮತ್ತು ನೇತಾಜಿ ಸರ್ಕಲ್ನಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ನಿರ್ಮಿಸಲಾಗುತ್ತಿದೆ. ಶೀಘ್ರ ಅವುಗಳ ಉದ್ಘಾಟನೆಯಾಗಲಿದೆ.
ಡಾ. ಕವಿತಾ ಯೋಗಪ್ಪನವರ್, ಮಹಾನಗರ ಪಾಲಿಕೆ ಕಮಿಷನರ್

![]()
ಇಂದಿರಾ ಕ್ಯಾಂಟೀನ್ ಊಟ, ತಿಂಡಿ ಮೆನು
ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೂರೈಸಲಾಗುತ್ತದೆ. ಬೆಳಗ್ಗೆ ಉಪಾಹಾರಕ್ಕೆ ಇಡ್ಲಿ, ಚಟ್ನಿ, ಸಾಂಬಾರ್, ಪುಳಿಯೊಗೆರೆ, ಪೊಂಗಲ್, ಚಿತ್ರಾನ್ನ, ವಾಂಗಿಬಾತ್ ನೀಡಲಾಗುತ್ತದೆ. ಉಪಾಹಾರಕ್ಕೆ 5 ರೂ. ದರ ನಿಗದಿಪಡಿಸಲಾಗಿದೆ.

ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಸಾಂಬಾರ್, ಮೊಸರನ್ನ, ಟೊಮೆಟೋ ಬಾತ್, ಪಲಾವ್ ನೀಡಲಾಗುತ್ತದೆ. ಕೆಲವೆಡೆ ಮುದ್ದೆ, ಚಪಾತಿ ನೀಡಲಾಗುತ್ತದೆ. ಊಟಕ್ಕೆ 10 ರೂ. ದರವಿದೆ.
ಇದನ್ನೂ ಓದಿ » ಶಿವಮೊಗ್ಗ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷ ಆಯ್ಕೆ, 10 ಮಂಡಲಕ್ಕೂ ಹೊಸ ಅಧ್ಯಕ್ಷರು, ಯಾರೆಲ್ಲ ಆಯ್ಕೆಯಾಗಿದ್ದಾರೆ?