ಶಿವಮೊಗ್ಗ: ಹುಳಗಳಿರುವ ಭತ್ತದ ಬೀಜ ವಿತರಣೆಗೆ ಮುಂದಾದ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗದ ಕೃಷಿ ಇಲಾಖೆ ಕಚೇರಿಯಲ್ಲಿ ಘಟನೆ ನಡೆದಿದೆ.
ನಿದಿಗೆ ಹೋಬಳಿಯ ರೈತರಿಗೆ ಶಿವಮೊಗ್ಗ ಒ.ಟಿ.ರಸ್ತೆಯ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಭತ್ತದ ಬೀಜ ವಿತರಣೆ ಮಾಡಲಾಗುತ್ತಿದೆ. ಇಲ್ಲಿನ ಗೋದಾಮಿನಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ವಿತರಣೆ ಮಾಡಲು ಇರಿಸಿದ್ದ ಭತ್ತದ ಬೀಜದ ಮೂಟೆಗಳಲ್ಲಿ ಹುಳಗಳು ಕಾಣಿಸಿಕೊಂಡಿದ್ದವು.

ಉಂಬ್ಳಬೈಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಂದ ಹಣ ಪಾವತಿಸಿಕೊಂಡು, ರಶೀದಿ ನೀಡಿ ಬೀಜ ವಿತರಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಭತ್ತದ ಬೀಜದ ಮೂಟೆಗಳಲ್ಲಿ ಹುಳಗಳಿರುವುದು ಗೊತ್ತಾಗಿದೆ. ರೈತರು ಗುಣಮಟ್ಟದ ಭತ್ತದ ಬೀಜ ವಿತರಣೆ ಮಾಡುವಂತೆ ಪಟ್ಟು ಹಿಡಿದಾಗ ಅಧಿಕಾರಿಗಳು ಉಡಾಫೆಯ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಧಿಕಾರಿಗಳಿಗೆ ತರಾಟೆ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಪ್ಕಾಮ್ಸ್ ಅಧ್ಯಕ್ಷ ವಿಜಯ ಕುಮಾರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭತ್ತದ ಬೀಜ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಹುಳ ಇರುವ ಭತ್ತದ ಬೀಜವನ್ನು ರೈತರಿಗೆ ವಿತರಣೆ ಮಾಡದಂತೆ ಆಗ್ರಹಿಸಿದರು. ಈಗಾಗಲೇ ರೈತರು ಹಣ ಪಾವತಿಸಿ ರಶೀದಿ ಪಡೆದಿದ್ದಾರೆ. ರೈತರಿಗೆ ಸಮಸ್ಯೆ ಮಾಡಬಾರದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.