ಶಿವಮೊಗ್ಗ: ಉತ್ತಮ ಆರೋಗ್ಯವು ಮನುಷ್ಯನಿಗೆ ಅಮೂಲ್ಯ ಆಸ್ತಿ. ಉನ್ನತ ಸಾಧನೆ ಮಾಡಲು ಯೋಗ, ಧ್ಯಾನ ಹಾಗೂ ಕಠಿಣ ಪರಿಶ್ರಮವೇ ರಹದಾರಿಯಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಬಸವನಗುಡಿಯ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ಯೋಗ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯವಿದ್ದರೆ ಮಾತ್ರ ಸಮಾಜಮುಖಿ ಹಾಗೂ ಜನಪರ ಕಾರ್ಯಗಳನ್ನು ಮಾಡಲು ಸಾಧ್ಯ. ಇಂತಹ ಉತ್ತಮ ಜಾಗೃತಿ ಶಿಬಿರಗಳ ಯಶಸ್ಸಿಗೆ ಸಂಘದ ವತಿಯಿಂದ ಅಗತ್ಯ ಬೆಂಬಲ ನೀಡಲಾಗುವುದು ಎಂದರು.
ಒತ್ತಡದ ಜೀವನಕ್ಕೆ ಯೋಗವೇ ಪರಿಹಾರ
ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯರು ಮಾತನಾಡಿ, “ಆಧುನಿಕ ಯುಗದ ಒತ್ತಡದ ಜೀವನ ಶೈಲಿ ಮತ್ತು ಕ್ರಮಬದ್ಧವಲ್ಲದ ಆಹಾರ ಸೇವನೆಯಿಂದ ಜನರು ಬಿಪಿ, ಶುಗರ್ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ದಿನಕ್ಕೆ ಒಂದು ಗಂಟೆ ನಿರಂತರವಾಗಿ ಯೋಗ ಮಾಡುವುದರಿಂದ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ” ಎಂದು ತಿಳಿಸಿದರು.
ವಿಶ್ವಕ್ಕೆ ಮಾದರಿಯಾದ ಭಾರತದ ಯೋಗ
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಯೋಗ ಕೇಂದ್ರದ ಅಧ್ಯಕ್ಷ ಎಸ್. ರುದ್ರೇಗೌಡ ಮಾತನಾಡಿ, “ಯಾವುದೇ ಔಷಧಿ ಮತ್ತು ಖರ್ಚಿಲ್ಲದೆ ಆರೋಗ್ಯ ಪಡೆಯುವ ಸುಲಭ ವಿಧಾನ ಯೋಗ. ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಸರಳ ಯೋಗಾಭ್ಯಾಸ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಭಾರತದ ಯೋಗ ಪರಂಪರೆಯನ್ನು ಇಂದು ಇಡೀ ವಿಶ್ವವೇ ಅನುಸರಿಸುತ್ತಿದೆ. ಯೋಗದಿಂದ ಕೆಲಸದಲ್ಲಿ ಕಾರ್ಯದಕ್ಷತೆ ಹೆಚ್ಚುವುದರಿಂದ ಇದು ದೇಶದ ಆರ್ಥಿಕ ಪ್ರಗತಿಗೂ ಬುನಾದಿಯಾಗಿದೆ” ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್, ಕೇಂದ್ರದ ಕಾರ್ಯದರ್ಶಿ ಹೆಚ್.ಎಂ. ಚಂದ್ರಶೇಖರಯ್ಯ ಸೇರಿ ಹಲವರು ಇದ್ದರು. ಇದೇ ಸಂದರ್ಭ ಯೋಗ ಶಿಕ್ಷಕರಾದ ವಿಜಯ ಬಾಯರ್, ಜಿ.ಎಸ್. ಓಂಕಾರ್, ಹೆಚ್.ಎಸ್. ಹರೀಶ್, ಕೇಶವಮೂರ್ತಿ, ಕೃಷ್ಣ ಹಾಗೂ ಇಳಂಗೋವನ್ ಅವರನ್ನು ಸನ್ಮಾನಿಸಲಾಯಿತು.

