ಶಿವಮೊಗ್ಗ: ಮನೆಯವರು ಕೊಠಡಿಯಲ್ಲಿ ನಿದ್ರೆ ಮಾಡುತ್ತಿದ್ದಾಗಲೇ ಬಾಗಿಲು ಚಿಲಕ ತೆಗೆದು ಒಳ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಅಂತರಜಿಲ್ಲಾ ಕಳ್ಳನನ್ನು ಬಂಧಿಸಲಾಗಿದೆ.
ಬಾಗಿಲು ಚಿಲಕ ತೆಗೆದು ಒಳ ಬಂದಿದ್ದು ಹೇಗೆ?
ನಗರದ ಚಾಲುಕ್ಯ ನಗರದಲ್ಲಿ ನಿವೃತ್ತ ಉದ್ಯೋಗಿಯೊಬ್ಬರ ಮನೆಯಲ್ಲಿದ್ದಾಗಲೇ ಕಳ್ಳತನ ನಡೆದಿತ್ತು. ಆರೋಪಿಯು ಬಾಗಿಲಿನ ಪಕ್ಕದಲ್ಲಿದ್ದ ಕಿಟಕಿಯನ್ನು ತೆರೆದು, ಅದರ ಮೂಲಕ ಕೈಹಾಕಿ ಬಾಗಿಲಿನ ಲಾಕ್ ತೆಗೆದು ಒಳ ನುಗ್ಗಿದ್ದ. ಮನೆಯವರು ಮಲಗಿದ್ದ ರೂಮಿನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಮತ್ತು ಮೊಬೈಲನ್ನು ದೋಚಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೊಲೀಸ್ ಕಾರ್ಯಾಚರಣೆ
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಮತ್ತು ಎಎಸ್ಪಿ ಎ.ಜಿ. ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ಹಾಗೂ ಪಿಎಸ್ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಚಾಂದ್ ಪೀರ್ @ ಮೊಹಮದ್ ಯೂನಸ್ (31) ಎಂಬಾತನನ್ನು ಬಂಧಿಸಿದೆ.

ಇದನ್ನೂ ಓದಿ : ಮಾಲೀಕ ಮನೆಯೊಳಗೆ ಮಲಗಿದ್ದಾಗಲೇ ಕಳ್ಳತನ, ಬೆಳಗ್ಗೆ ಎದ್ದಾಗ ಪ್ರಕರಣ ಬಹಿರಂಗ, ಹೇಗಾಯ್ತು?
ಬಂಧಿತನಿಂದ ಅಂದಾಜು ₹2,00,000ಮೌಲ್ಯದ 19 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡದಲ್ಲಿ ಪಿಎಸ್ಐಗಳಾದ ರಘುವೀರ ಎಂ, ಮಂಜಮ್ಮ ಹಾಗೂ ಸಿಬ್ಬಂದಿ ಕಿರಣ್ ಮೋರೆ, ಅರುಣ್ಕುಮಾರ್, ಹರೀಶ್, ರಂಗನಾಥ್ ಮತ್ತು ತಮ್ಮಣ್ಣ ಜಂಬಗಿ ಪಾಲ್ಗೊಂಡಿದ್ದರು.







