ವಿಧಾನಸಭೆಯಲ್ಲಿ ಎಂಎಲ್ಎ ಪ್ರಸ್ತಾಪಿಸಿದ್ದೇನು?
ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣವಾದ ನಂತರ, ಪ್ರಖ್ಯಾತ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಸಾವಿರಾರು ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗಿರುವ ಕಾರ್ಗಲ್ ಠಾಣೆಯ 80 ಕಿ.ಮೀ. ದೂರದಲ್ಲಿದೆ. ಯಾವುದೇ ಸಮಸ್ಯೆ ಉಂಟಾದರೆ ತಕ್ಷಣಕ್ಕೆ ಸ್ಪಂದಿಸಲು ಕಷ್ಟವಾಗುತ್ತದೆ. ಜನಸಂಖ್ಯೆ ಹೆಚ್ಚಿರುವುದರಿಂದ ಮತ್ತು ಭಕ್ತರ ಹಿತದೃಷ್ಟಿಯಿಂದ ಹೊಸ ಠಾಣೆ ಅಗತ್ಯವಿದೆ ಎಂದು ಶಾಸಕರು ಸಚಿವರ ಗಮನ ಸೆಳೆದರು.

ಹೋಮ್ ಮಿನಿಸ್ಟರ್ ಹೇಳಿದ್ದೇನು?
ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸದ್ಯ ಆ ಭಾಗದಲ್ಲಿ ಒಂದು ಪೊಲೀಸ್ ಔಟ್ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಪೊಲೀಸ್ ಆಯೋಗದ ಮಾನದಂಡಗಳ ಪ್ರಕಾರ ಹೊಸ ಪೊಲೀಸ್ ಠಾಣೆ ಸ್ಥಾಪಿಸಲು ನಿಯಮಗಳು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಮಾನದಂಡಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿರುವುದರಿಂದ ಅಧಿಕಾರಿಗಳು ನಿಯಮದ ಚೌಕಟ್ಟಿನಲ್ಲಿ ಉತ್ತರ ನೀಡಿದ್ದಾರೆ ಎಂದರು.
ಇದನ್ನು ಓದಿ » ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು, ಕಾರಣವೇನು?
ಇತ್ತೀಚೆಗೆ ಸಿಗಂದೂರಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕುರಿತು ಸರ್ಕಾರಕ್ಕೆ ಮಾಹಿತಿ ಇದೆ. ಹೊಸದಾಗಿ ಠಾಣೆ ಸ್ಥಾಪನೆಯ ಬೇಡಿಕೆಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಮುಂಬರುವ ಬಜೆಟ್ ಸಂದರ್ಭ ರಾಷ್ಟ್ರೀಯ ಮಾನದಂಡದಲ್ಲಿ ಒಂದಿಷ್ಟು ಸಡಿಲಗೊಳಿಸಿ, ಸಿಗಂದೂರಿನಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲು ಮುಖ್ಯಮಂತ್ರಿಗಳ ಬಳಿ ವಿನಂತಿ ಮಾಡಿ ಪ್ರಯತ್ನಿಸಲಾಗುವುದು ಎಂದು ಡಾ. ಜಿ.ಪರಮೇಶ್ವರ್ ತಿಳಿಸಿದರು.