ಶಿವಮೊಗ್ಗ ಲೈವ್.ಕಾಂ | BHADRAVATHI NEWS | 23 APRIL 2021
ನಿರ್ಬಂಧ ವ್ಯಾಪಾರಿಗಳಿಗೆ ಮಾತ್ರ. ರಾಜಕೀಯ ಪ್ರಚಾರಕ್ಕಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಇದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಈ ನಡುವೆ ವ್ಯಾಪಾರಿಗಳಲ್ಲಿ ಆಕ್ರೋಶವನ್ನು ಹೆಚ್ಚಿಸಿದೆ.
ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಿಗದಿಯಾಗಿದೆ. ಕೋವಿಡ್ ನಿರ್ಬಂಧ ಇರುವುದರಿಂದ ಬಹಿರಂಗ ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ.
ಗುಂಪು ಗುಂಪಾಗಿ ಮನೆ ಬರ್ತಾರೆ
ಮತದಾನದ ದಿನಾಂಕ ಹತ್ತಿರವಾಗುತ್ತಿದೆ. ಕೋವಿಡ್ ನಿಯಮವಿದೆ. ಈ ನಡುವೆ ಹೆಚ್ಚು ಜನರನ್ನು ತಲುಪುವ ಅನಿವಾರ್ಯತೆ ಇದೆ. ಇದು ಅಭ್ಯರ್ಥಿಗಳ ಢವಢವ ಹೆಚ್ಚಿಸಿದೆ. ಹಾಗಾಗಿ ಮನೆ ಮನೆ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಗುಂಪು ಗುಂಪಾಗಿ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇದುವೆ ಜನರಲ್ಲಿ ಭೀತಿ ಮೂಡಿಸಿದೆ.
‘ಹತ್ತು, ಇಪ್ಪತ್ತು ಜನರು ಮನೆ ಬಳಿಗೆ ಬರ್ತಾರೆ. ಪ್ರಚಾರ ಮಾಡ್ತಾರೆ. ಎಲ್ಲರೂ ಪರಿಚಿತರೆ ಇರ್ತಾರೆ. ಮನೆ ಬಳಿಗೆ ಬರಬೇಡಿ ಅನ್ನಲು ಆಗುವುದಿಲ್ಲ. ಬನ್ನಿ ಎಂದು ಮನಃಪೂರ್ವಕವಾಗಿ ಒಳಗೆ ಕರೆಯಲು ಆಗುವುದಿಲ್ಲ. ಕರೋನ ಸೋಂಕು ಯಾರಿಗೆ ತಗುಲಿರುತ್ತದೆ ಎಂದು ಗೊತ್ತಾಗುವುದು ಹೇಗೆ. ಇದಕ್ಕೇನು ಪರಿಹಾರವಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ಭದ್ರಾವತಿಯ ಶ್ರೀನಿವಾಸ್.
ಗುಂಪು ಗುಂಪಾಗಿ ಬರೋದೆ ಭಯ
‘ಆ ಪಕ್ಷ, ಈ ಪಕ್ಷ ಅಂತೇನಿಲ್ಲ. ಎಲ್ಲರದ್ದು ಇದೆ ಸ್ಥಿತಿ. ಮನೆಯಲ್ಲಿ ಮಕ್ಕಳಿದಾರೆ, ಹಿರಿಯರಿದ್ದಾರೆ ಬರಬೇಡಿ ಎಂದು ಹೇಳಿದರೆ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮ ಮನಸಲ್ಲಿ ಭಯ ಆವರಿಸುತ್ತದೆ’ ಎಂದು ಭದ್ರಾವತಿ ಗಾಂಧಿನಗರದ ನಿವಾಸಿಯೊಬ್ಬರು ಆರೋಪಿಸುತ್ತಾರೆ.
ನಿರ್ಬಂಧ ವ್ಯಾಪಾರಿಗಳಿಗೆ ಮಾತ್ರಾನಾ?
ಅಗತ್ಯ ವಸ್ತುಗಳು ಹೊರತು ಉಳಿದ್ಯಾವುದೆ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲ. ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. ಆದರೆ ಪ್ರಚಾರಕ್ಕೆ ಬರುವವರ ಮೇಲೆ ನಿರ್ಬಂಧವಿಲ್ಲ, ಕಣ್ಣಿಡುತ್ತಿಲ್ಲ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಡಿಸಿ ಹೇಳೋದೇನು?
ಇನ್ನು, ಈ ಕುರಿತು ಜಿಲ್ಲಾಧಿಕಾರಿ ಅವರ ಗಮನ ಸೆಳೆದಾಗ, ಎಲೆಕ್ಷನ್ ಕಮಿಷನ್ ಗೈಡ್ಲೈನ್ಸ್ ಪ್ರಕಾರ ಮನೆ ಮನೆಗೆ ಹೋಗಿ ಮತ ಕೇಳಲು ಅವಕಾಶವಿದೆ. ಗುಂಪು ಸೇರಿ ಪ್ರಚಾರ ನಡೆಸಲು ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಕೂಡ ಸ್ಪಷ್ಟವಾಗಿ ತಿಳಿಸಿದೆ. ಅಂತಹ ಬೆಳವಣಿಗೆಗಳು ನಡೆದಾಗ ತಹಶೀಲ್ದಾರ್ ಅವರು ಕ್ರಮ ಕೈಗೊಂಡಿದ್ದಾರೆ. ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ಪ್ರಚಾರಕ್ಕೆ ಅವಕಾಶವಿದೆ. ಗುಂಪು ಸೇರಿದರೆ ನಮಗೆ ತಿಳಿಸಿದರೆ ಗಮನ ಹರಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಅಂಗಡಿಗಳು ತೆಗೆದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ಕರೋನ ಹರಡುವ ಭೀತಿಯನ್ನು ಸರ್ಕಾರ ವ್ಯಕ್ತಪಡಿಸುತ್ತದೆ. ಆದರೆ ಪ್ರಚಾರದ ವಿಚಾರದಲ್ಲಿ ಕಠಿಣ ನಿರ್ಬಂಧ ವಿಧಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಜನರು ಕೂಡ ಭೀತಿಯಲ್ಲಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]