ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JANUARY 2021
ಬಾರ್ನಲ್ಲಿ ಕ್ಷುಲಕ ವಿಚಾರಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಗೆ ಕಾರಣವಾಗಿದೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಇನ್ನು, ಈ ಕಿರಿಕ್ ಮತ್ತು ಕೊಲೆ ಗಂಭೀರ ಸ್ವರೂಪ ಪಡೆದುಕೊಳ್ಳಬಾರದು ಎಂಬ ಕಾರಣಕ್ಕೆ, ಶಿವಮೊಗ್ಗ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕ್ಷುಲಕ ಕಾರಣವೇನು?
ಶಿವಮೊಗ್ಗದ ಎನ್.ಟಿ.ರಸ್ತೆಯ ಸುಂದರ ಆಶ್ರಯ ಬಾರ್ನಲ್ಲಿ ಗಲಾಟೆಯಾಗಿ, ಕೆ.ಆರ್.ಪುರಂ ನಿವಾಸಿ ಜೀವನ್ ಎಂಬಾತನ ಕೊಲೆಯಾಗಿದೆ. ಸೀಗೆಹಟ್ಟಿಯ ಕೇಶವ್ ಶೆಟ್ಟಿಗೆ ಗಂಭೀರ ಗಾಯವಾಗಿದೆ. ಬಾರ್ನಲ್ಲಿ ಪಾರ್ಟಿ ಮಾಡುವ ಹೊತ್ತಿಗೆ, ಜೀವನ್ನ ಸಹೋದರ ಸ್ವರೂಪ್, ಅಪರಿಚಿತನೊಬ್ಬನಿಗೆ ‘ಏನ್ ಮಗಾ’ ಎಂದು ಬೆನ್ನ ಮೇಲೆ ಕೈ ಇಟ್ಟಿದ್ದೆ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಅಪರಿಚಿತನ ಜೊತೆ ಕಿರಿಕ್
ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರೂಪ್, ಜೀವನ್ ಮತ್ತು ನನ್ನ ಸ್ನೇಹಿತರು ಸಿಕ್ಕಿದ್ದರು. ಪಾರ್ಟಿ ಮಾಡೋಕೆ ಅಂತಾ ಹೋಗಿದ್ದೆವು. ಫೋನ್ ಬಂದಿದ್ದರಿಂದ ಬಾರ್ನಿಂದ ಹೊರಗೆ ಹೋಗಿ ಹಿಂತಿರುಗಿದೆ. ಸ್ನೇಹಿತನೊಬ್ಬನನ್ನು ಕಂಡಂತೆ ಆಯ್ತು. ಹಾಗಾಗಿ ಒಬ್ಬ ಯುವಕನ ಬೆನ್ನ ಮೇಲೆ ಕೈ ಹಾಕಿ ‘ಏನ್ ಮಗಾ ಇಲ್ಲಿ’ ಎಂದು ವಿಚಾರಿಸಿದೆ. ಆದರೆ ಆತ ನನ್ನ ಸ್ನೇಹಿತನಾಗಿರಲಿಲ್ಲ. ಸಾರಿ ಕೇಳಿದೆ. ಆದರೆ ಆತನ ಜೊತೆಗಿದ್ದವರು ಜಗಳ ತೆಗೆದರು ಎಂದು ವಿವರಿಸಿದರು.
ಜಗಳ ಬಿಡಿಸಿದ ಸ್ನೇಹಿತರು
ಜಗಳ ಆಗುತ್ತಿದ್ದದ್ದನ್ನು ಗಮನಿಸಿದ ಸ್ವರೂಪ್ನ ಸ್ನೇಹಿತರು, ಮಧ್ಯಪ್ರವೇಶಿಸಿದ್ದಾರೆ. ಜಗಳ ಬಿಡಿಸಿದ್ದಾರೆ. ‘ಸ್ವಲ್ಪ ಹೊತ್ತಿನ ಬಳಿಕ ಪಾರ್ಟಿ ಮುಗಿಸಿ ಜೀವನ್ ಮತ್ತು ಕೇಶವ್ ಶೆಟ್ಟಿ ಹೊರಗೆ ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಹಲ್ಲೆಯಾಗಿದೆ. ನಾವು ಹೋಗಿ ಅವರನ್ನು ಆಸ್ಪತ್ರೆಗೆ ಸೇರಿಸಿದೆವು’ ಎಂದು ಸ್ವರೂಪ್ ತಿಳಿಸಿದ್ದಾರೆ.
ಇದನ್ನೂ ಓದಿ | SHIMOGA CRIME | ಯುವಕನ ಬರ್ಬರ ಹತ್ಯೆ, ಮತ್ತೊಬ್ಬನಿಗೆ ಗಂಭೀರ ಗಾಯ, ತಡರಾತ್ರಿ ಕೃತ್ಯ
ಮೂವರ ಮೇಲೆ ಅಟ್ಯಾಕ್
ಘಟನೆಯಲ್ಲಿ ಮೂವರ ಮೇಲೆ ಅಟ್ಯಾಕ್ ಮಾಡಲಾಗಿದೆ ಎಂದು ಸ್ವರೂಪ್ ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಜೀವನ್ ಅಸುನೀಗಿದ್ದಾರೆ. ಕೇಶವ್ ಶೆಟ್ಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಬ್ಬರಿಗೆ ಗಾಯವಾಗಿದ್ದು, ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ನಗರಾದ್ಯಂತ ಬಿಗಿ ಬಂದೋಬಸ್ತ್
ಕೊಲೆ, ಹಲ್ಲೆ ವಿಚಾರ ತಿಳಿಯುತ್ತಿದ್ದಂತೆ ನಗರಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹೊರ ಜಿಲ್ಲೆಯ ಪೊಲೀಸರನ್ನು ನಗರಕ್ಕೆ ಕರೆಯಿಸಿಕೊಳ್ಳಲಾಗಿದೆ. ಪೂರ್ವ ವಲಯ ಐಜಿಪಿ ಎಸ್.ರವಿ ಅವರು ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಬಂದೋಬಸ್ತ್ ಕೈಗೊಂಡಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]