SHIVAMOGGA LIVE NEWS | 27 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ (Bandobast) ಕೈಗೊಳ್ಳಲಾಗಿದೆ. ಭದ್ರತೆಗಾಗಿ 2500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಎಷ್ಟು ಪೊಲೀಸ್ ಸಿಬ್ಬಂದಿ ನಿಯೋಜನೆ?
5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 14 ಪೊಲೀಸ್ ಉಪಾಧೀಕ್ಷಕರು, 40 ಪೊಲೀಸ್ ಇನ್ಸ್ಪೆಕ್ಟರ್ಗಳು, 75 ಸಬ್ ಇನ್ಸ್ಪೆಕ್ಟರ್ಗಳು, 2,500 ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿ, 10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 2 ಆರ್.ಎ.ಎಫ್ ಕಂಪನಿಗಳು 100 ವಿಡಿಯೋ ಕ್ಯಾಮರಾಗಳು ಮತ್ತು 8 ಡ್ರೋಣ್ ಕ್ಯಾಮರಾಗಳನ್ನು ನಿಯೋಜಿಸಲಾಗುತ್ತಿದೆ. ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಪೊಲೀಸರಿಂದ ರೂಟ್ ಮಾರ್ಚ್
ಶಿವಮೊಗ್ಗ ನಗರದಲ್ಲಿ ಪೊಲೀಸರು ರೂಟ್ ಮಾರ್ಚ್ (ಪಥ ಸಂಚಲನ) ನಡೆಸಿದರು. ಗೋಪಿ ವೃತ್ತದಿಂದ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ಎಂಕೆಕೆ ರಸ್ತೆ, ಕೆ.ಆರ್.ಪುರಂನಿಂದ ಆರ್.ಎಂ.ಎಲ್ ನಗರದ ಟೆಂಪೋ ಸ್ಟಾಂಡ್ವರೆಗೆ ರೂಟ್ ಮಾರ್ಚ್ ನಡೆಸಲಾಯಿತು.
ಪೊಲೀಸರಿಗೆ ಪೌಷ್ಠಿಕಾಂಶ ಊಟ
ಬಂದೋಬಸ್ತ್ಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಗುಣಮಟ್ಟಣದ ಆಹಾರ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸೆ.27ರ ಮಧ್ಯಾಹ್ನದಿಂದಲೆ ಊಟದ ವ್ಯವಸ್ಥೆ ಮಾಡಲಾಗಿದೆ. ಇಂದು ರಾತ್ರಿ ಹೆಸರು ಬೇಳೆ ಪಾಯಸ, ಚಪಾತಿ, ಕಡ್ಲೆಕಾಳು ಸಾಗು, ಅನ್ನ, ಬಣ್ಣದ ಸೌತೆಕಾಯಿ ಸಾಂಬಾರ್ ಮಾಡಲಾಗಿದೆ. ಸೆ.28ರಂದು ಬೆಳಗ್ಗೆ ಉಪ್ಪಿಟ್ಟು, ಕೇಸರಿಬಾತ್ ತಿಂಡಿ ಇರಲಿದೆ.
ಇದನ್ನೂ ಓದಿ – ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್
ಮಧ್ಯಾಹ್ನ ಕರ್ತವ್ಯ ನಿರತ ಸಿಬ್ಬಂದಿಗೆ ತಾವು ಇದ್ದಲ್ಲಿಗೆ ಊಟದ ಪಾರ್ಸಲ್ ಕಳುಹಿಸಲಾಗುತ್ತದೆ. ಪಲಾವ್, ಮೊಸರು ಬಜಿ, ಕಾಯಿ ಹೋಳಿಗೆ, ಕಡ್ಲೆಬೇಳೆ ವಡೆ, ಬಿಸ್ಕತ್ ಪ್ಯಾಕ್, ಚಿಕ್ಕಿ ಪ್ಯಾಕ್, ಒಂದು ಲೀಟರ್ ನೀರಿನ ಬಾಟಲಿ ವ್ಯವಸ್ಥೆ ಮಾಡಲಾಗಿದೆ.