SHIVAMOGGA LIVE NEWS | 15 FEBRUARY 2024
SHIMOGA : ಕಾನೂನು ರಕ್ಷಣೆಗಾಗಿ ಲಾಠಿ ಹಿಡಿಯುವುದು, ದಂಡ ವಿಧಿಸುವುದಷ್ಟೇ ಪೊಲೀಸರ ಕರ್ತವ್ಯವಲ್ಲ. ಅಪರಾಧ ತಡೆಗೆ ಜನರಲ್ಲಿ ಕಾನೂನು ಅರಿವು ಮೂಡಿಸುವುದು ಕೂಡ ಖಾಕಿ ತೊಟ್ಟವರ ಪ್ರಮುಖ ಉದ್ದೇಶ. ಇದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಮಧ್ಯೆ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರು ಜನಜಾಗೃತಿಗಾಗಿ ಬೈಕ್ ಏರಿದ್ದಾರೆ. ದೇಶ ಪರ್ಯಟನೆ ಆರಂಭಿಸಿದ್ದಾರೆ.
ಶಿವಮೊಗ್ಗದ ಮಹಿಳಾ ಠಾಣೆ ಸಿಬ್ಬಂದಿ ಸತೀಶ್ ಕುಬಟೂರು ಅವರು ಇಂದಿನಿಂದ 15 ದಿನ 10 ರಾಜ್ಯಗಳಲ್ಲಿ ಬೈಕ್ ಯಾತ್ರೆ ನಡೆಸಲಿದ್ದಾರೆ. ಸತೀಶ್ ಅವರ ಈ ಸಾಹಸಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಚಾಲನೆ ನೀಡಿದರು.
ಎಲ್ಲೆಲ್ಲಿ ತೆರಳಲಿದೆ ಯಾತ್ರೆ? ಉದ್ದೇಶವೇನು?
ಸತೀಶ್ ಕುಬಟೂರು ಅವರು ಶಿವಮೊಗ್ಗದಿಂದ ಯಾತ್ರೆ ಆರಂಭಿಸಿದ್ದಾರೆ. ಇಲ್ಲಿಂದ ಮಹಾರಾಷ್ಟ್ರದ ಮೂಲಕ ದೆಹಲಿವರೆಗು ತೆಲುಪಲಿದ್ದಾರೆ. ಸ್ವಂತ ಖರ್ಚಿನಲ್ಲಿ ಸುಮಾರು 4000 ಕಿ.ಮೀ. ಬೈಕ್ ಯಾತ್ರೆ ಮಾಡಲಿದ್ದಾರೆ. ಇನ್ನು, ದಾರಿ ಉದ್ದಕ್ಕೂ ಸಾರ್ವಜನಿಕರು ಮತ್ತು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಬೈಕ್ ಯಾತ್ರೆಯ ಪ್ರಮುಖ ಉದ್ದೇಶ.
ಮಾನವ ಕಳ್ಳ ಸಾಗಣೆ, ಪೋಕ್ಸೋ, ಸಂಚಾರ ನಿಯಮಗಳ ಕುರಿತು ಜಾಗೃತಿ ಯಾತ್ರೆಯ ಉದ್ದೇಶ. ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜನರು, ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಅದಕ್ಕಾಗಿ ಕರಪತ್ರಗಳನ್ನು ಕೂಡ ಮುದ್ರಿಸಿಕೊಂಡಿದ್ದೇನೆ. ರಾಜ್ಯ ವ್ಯಾಪ್ತಿಯಲ್ಲಿ ಕನ್ನಡದಲ್ಲಿಯೇ ಕರಪತ್ರ ಹಂಚುತ್ತೇನೆ. ಉಳಿದ ರಾಜ್ಯಗಳಲ್ಲಿ ಇಂಗ್ಲೀಷ್ ಕರಪತ್ರಗಳನ್ನು ಹಂಚಲಿದ್ದೇನೆ.ಸತೀಶ್ ಕುಬಟೂರು, ಪೊಲೀಸ್ ಸಿಬ್ಬಂದಿ
ಸತೀಶ್ ಅವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಕೂಡ ಬೆಂಬಲವಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಅಗತ್ಯ ಮಾಹಿತಿ, ಸಲಹೆ ನೀಡಿದ್ದಾರೆ. ಸದಾ ಕಾರ್ಯದೊತ್ತಡ ಮತ್ತು ಬಂದೋಬಸ್ತ್ನಲ್ಲಿ ನಿರತವಾಗಿರುವ ಪೊಲೀಸ್ ಸಿಬ್ಬಂದಿ, ಜನ ಜಾಗೃತಿಗಾಗಿ ವಿಭಿನ್ನ ಪ್ರಯತ್ನ ಮಾಡಿರುವುದು ಜನ ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ – ಗೋಪಿ ಸರ್ಕಲ್ನಲ್ಲಿ ಲಿಂಗ ಪೂಜೆ, ಮೀಸಲಾತಿಗಾಗಿ ಆಗ್ರಹ, ಸರ್ಕಾರದ ವಿರುದ್ಧ ಯತ್ನಾಳ್ ಆಕ್ರೋಶ