SHIVAMOGGA LIVE | 3 JULY 2023
SHIMOGA : ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡು (BULLET) ಹಾರಿಸಿದ್ದಾರೆ. ಬಂಧಿಸಲು ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. ಆಯನೂರು ಸಮೀಪದ ದೊಡ್ಡದಾನವಂದಿ ಗ್ರಾಮದಲ್ಲಿ ಸೈಫುನನ್ನು ಬಂಧಿಸಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.
ಆಸ್ಪತ್ರೆಗೆ ಆರೋಪಿ ಶಿಫ್ಟ್
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸೈಫುಲ್ಲಾ ತಲೆಮರೆಸಿಕೊಂಡಿದ್ದ. ಈತನ ಕುರಿತು ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್ ಮೇಲೆ ಸೈಫು ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪಿಎಸ್ಐ ನವೀನ್ ಅವರು ಸೈಫುಲ್ಲಾ ಕಾಲಿಗೆ ಗುಂಡು (BULLET) ಹೊಡೆದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಶಾಸಕರ ಕಚೇರಿಯಲ್ಲೇ ಸಭೆ ಮಧ್ಯೆ ವ್ಯಕ್ತಿ ಮೇಲೆ ಹಲ್ಲೆ
ಸೈಫುಲ್ಲಾನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿ ನಾಗರಾಜ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾರು ಈ ಸೈಫು?
ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ವಿವಿಧ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರಿಗೆ ಬೇಕಾಗಿದ್ದ ಆರೋಪಿ. ಜಯನಗರ ಠಾಣೆಯ ವ್ಯಾಪ್ತಿಯಲ್ಲಿನ ಕೊಲೆ ಯತ್ನ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ. ಗೂಂಡಾ ಕಾಯ್ದೆ ಅಡಿ ಜೈಲಿನಲ್ಲಿರುವ ಮಾರ್ಕೆಟ್ ಫೌಜಾನ್ ಗ್ಯಾಂಗ್ನ ಸದಸ್ಯನಾಗಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ, ಟೈಮಿಂಗ್ ಏನು? ಏರೋ ಶೋಗೆ ಸಂಸದರು ಮನವಿ ಮಾಡಿದ್ದೇಕೆ?
ಸೈಫುಲ್ಲಾ ಖಾನ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣ ದಾಖಲಾಗಿವೆ. ಈ ಪೈಕಿ ದೊಡ್ಡಪೇಟೆ ಠಾಣೆಯಲ್ಲಿ 16, ತುಂಗಾ ನಗರ ಮತ್ತು ಜಯನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳಿವೆ.