SHIVAMOGGA LIVE NEWS | 27 MARCH 2024
ಗಾಂಜಾ ಸೇವನೆ, ಇಬ್ಬರ ಬಂಧನ
SHIMOGA : ಶರಾವತಿ ನಗರ ಚಾನಲ್ ಬಳಿ ಗಾಂಜಾ ಸೇವನೆ ಮಾಡಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಗಸ್ತು ತಿರುಗುವ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಇಬ್ಬರು ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಧನುಶ್ (22) ಮತ್ತು ಅಸ್ಗರ್ (29) ಎಂಬುವವರನ್ನು ಬಂಧಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಅಪಘಾತ, ಗಂಭೀರ ಗಾಯ
SHIMOGA : ಓಮ್ನಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ ಲಕ್ಷ್ಮೀಪುರ ತಾಂಡ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿ ಕೆಲಸ ಮುಗಿಸಿಕೊಂಡು ವಿನೋದ್ ಕುಮಾರ್ ತಮ್ಮೂರು ಹೊಸಳ್ಳಿಗೆ ಮರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ವಿನೋದ್ ಕುಮಾರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊರುಗಡೂರಿನಲ್ಲಿ ಪೊಲೀಸರ ದಾಳಿ
SHIMOGA : ಊರು ಗಡೂರಿನಲ್ಲಿ ಶೆಡ್ ಒಂದರಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಪೊಲೀಸರನ್ನು ಕಂಡು ಶೆಡ್ನಲ್ಲಿದ್ದವರು ಪರಾರಿಯಾಗಿದ್ದಾರೆ. ಶೆಡ್ನಲ್ಲಿ ಸುಮಾರು 12 ಕೆ.ಜಿ. ತೂಕದ ಗೋಮಾಂಸ, ತಕ್ಕಡಿ, ಮಚ್ಚುಗಳು ಸೇರಿ ಸುಮಾರು 6 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಲೀಂ ಎಂಬಾತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ KSRTC ನಿಲ್ದಾಣದಲ್ಲಿ ವ್ಯಕ್ತಿ ಸಾವು | ರೈಲಿಗೆ ಸಿಲುಕಿ ವ್ಯಕ್ತಿ ಮೃತ | ಡಿಕ್ಕಿ ಹೊಡೆಸಿ ಕಾರು ಬಿಟ್ಟು ಚಾಲಕ ಪರಾರಿ