ಶಿವಮೊಗ್ಗ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ಕಾಲ್ತಿಳಿತ (Stampede) ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಹೇಳಿದ್ದೇನು? ಇಲ್ಲಿದೆ ಪ್ರಮುಖಾಂಶ
» ಹಠ ಮತ್ತು ಚಟ: ‘ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಗೆಲುವಿನಲ್ಲಿ ಪಾಲು ಪಡೆಯಲು ಇಬ್ಬರು ದಿಗ್ಗಜರ ನಡುವಿನ ಹಠ ಮತ್ತು ಚಟದ ಪರಿಣಾಮ ಬೆಂಗಳೂರಿನಲ್ಲಿ ಘೋರ ದುರಂತ ನಡೆಯಿತು. ಜೂನ್ 4 ರಾಜ್ಯದ ಪಾಲಿಗೆ ಅತ್ಯಂತ ಕರಾಳ ದಿನ.’ ಎಂದರು.
» ಸಿಎಂಗೆ ಅನಿಸಲೇ ಇಲ್ಲ: ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು. ಒಬ್ಬ ಕಿರಿಯ ಪೊಲೀಸ್ ಅಧಿಕಾರಿಗೆ ಅನಿಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಅನಿಸಲೇ ಇಲ್ಲ. ‘ಕೇವಲ 30 – 40 ಸಾವಿರ ಜನರು ಸೇರುತ್ತಾರೆ’ ಅಂದುಕೊಂಡಿದ್ದೆವು ಎಂದು ಆ ಬಳಿಕ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
» ಕಪ್ ಹಿಡಿದು ಓಡುತ್ತಿದ್ದರು: ಆರ್ಸಿಬಿ ಗೆಲುವಿನ ನಂತರ ವಿಧಾನಸೌಧದ ಮೆಟ್ಟಿಲಿನ ಮೇಲೆ ಸಿಎಂ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಡಿಸಿಎಂ ಅವರು ಪೈಪೋಟಿಗೆ ಬಿದ್ದವರಂತೆ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಆಟಗಾರರನ್ನು ತಬ್ಬಿಕೊಂಡು, ಅಪ್ಪಿಕೊಂಡು ಬಂದಿದ್ದರು. ಸ್ವಲ್ಪ ಅವಕಾಶ ಸಿಕ್ಕಿದ್ದರೆ ಡಿ.ಕೆ.ಶಿವಕುಮಾರ್ ಅವರು ಆರ್ಸಿಬಿ ಕಪ್ ಅನ್ನೇ ಕಿತ್ತುಕೊಂಡು ಓಡಿಹೋಗುವಂತಿದ್ದರು ಎಂದು ಲೇವಡಿ ಮಾಡಿದರು.
» ಕುಟುಂಬದವರೆ ಸುತ್ತುವರಿದಿದ್ದರು: ವಿಧಾನಸೌಧದ ಮೆಟ್ಟಿಲ ಮೇಲೆ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಕುಟುಂಬದವರೆ ಸುತ್ತುವರೆದಿದ್ದರು. ವಿಧಾನಸೌಧದ ಮುಂದೆ ಅಭಿಮಾನಿಗಳಿಗೆ ಆಟಗಾರರು ಕಾಣಿಸಲಿಲ್ಲ. ಹಾಗಾಗಿ ಅಲ್ಲಿದ್ದ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಕಡೆಗೆ ಧಾವಿಸಿದ್ದರು. ಇದರಿಂದ ಸಮಸ್ಯೆ ಹೆಚ್ಚಾಯಿತು ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
» ಮಸಾಲೆ ದೋಸೆ ತಿನ್ನುತ್ತಿದ್ದರು: 4 ಗಂಟೆಗೆ ಘಟನೆ ಆಗಿತ್ತು. ಕಾಲ್ತುಳಿತ ಮತ್ತು ಸಾವಿನ ಕುರಿತು ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತಿತ್ತು. ಸಂಜೆ 5 ಗಂಟೆವರೆಗೆ ನಾಡಿನ ದೊರೆಗೆ ಈ ವಿಷಯ ಗೊತ್ತೇ ಇರಲಿಲ್ಲ. ಕುಟುಂಬದ ಜೊತೆಗೆ ಸಿದ್ದರಾಮಯ್ಯ ಅವರು ಎಂಟಿಆರ್ ಹೊಟೇಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು. ಈ ಮೂಲಕ ಅವರು ಉದ್ಧಟತನದಿಂದ ವರ್ತಸಿದ್ದಾರೆ. ಇದೇನ ಸರ್ಕಾರದ ಜವಾಬ್ದಾರಿ? ಎಂದು ಪ್ರಶ್ನಿಸಿದರು.
» ಕೈ ತುಳಿತಕ್ಕೆ ಪೊಲೀಸ್ ಬಲಿ: ಕಾಲ್ತುಳಿತಕ್ಕೆ ಅಭಿಮಾನಿಗಳು ಬಲಿಯಾದರೆ, ಕೈ ತುಳಿತಕ್ಕೆ ಪೊಲೀಸರು ಬಲಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಹರಕೆ ಕುರಿ ಮಾಡಲಾಗಿದೆ ಎಂದರು.
» ಹುಚ್ಚು ಕುದುರೆಗಳು: ಇವರು ಜನಪ್ರಿಯತೆ ಹಿಂದೆ ಓಡುತ್ತಿರುವ ಹುಚ್ಚು ಕುದುರೆಗಳು. ಅಧಿಕಾರದಲ್ಲಿ ಇರುವವರೆಗೆ ರಾಜ್ಯದ ಘನತೆಗೆ ಧಕ್ಕೆ ತಪ್ಪುವುದಿಲ್ಲ. ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂರನ್ನು ದೆಹಲಿಗೆ ಕರೆಸಿಕೊಂಡಿದೆ. ಆದರೆ ಹೈಕಮಾಂಡ್ ಕ್ರಮ ಕೈಗೊಳ್ಳುವಷ್ಟು ಗಟ್ಟಿ ಇದೆ ಎಂದೇನು ಅನಿಸುತ್ತಿಲ್ಲ. ದೇಹ ಬಾಲವನ್ನು ಅಲುಗಾಡಿಸಬೇಕು. ಆದರೆ ಇಲ್ಲಿ ಬಾಲವೇ ದೇಹವನ್ನು ಅಲುಗಾಡಿಸುತ್ತಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದರು.
» ಬಹಿರಂಗ ಪತ್ರ: ಘಟನೆ ಕುರಿತು ಬಹಿರಂಗ ಪತ್ರ ಬರೆದಿದ್ದೇನೆ. ಸಿಎಂ ತೇಜೋವಧೆ ಅಥವಾ ರಾಜಕೀಯ ಕಾರಣಕ್ಕೆ ಪತ್ರ ಬರೆದಿದ್ದಲ್ಲ. ನೊಂದ ಕುಟುಂಬದ ಸದಸ್ಯರ ಭಾವನೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಮನದಟ್ಟು ಮಾಡಲು ಈ ಪತ್ರ ಬರೆಯಲಾಗಿದೆ. ಇದಕ್ಕೆ ಸಿಎಂ ಸ್ಪಂದಿಸುತ್ತಾರೆ ಎಂಬ ಭಾವನೆ ನನಗಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ ಸೇರಿ ಹಲವರು ಇದ್ದರು.
ಇದನ್ನೂ ಓದಿ » ಶಿವಮೊಗ್ಗದ ಅಂಗನವಾಡಿಗಳಿಗೆ ಲೋಕಾಯುಕ್ತರು ದಿಢೀರ್ ಭೇಟಿ, ಪರಿಶೀಲನೆ ವೇಳೆ ಕಾದಿತ್ತು ಆಘಾತ

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200