‘ರಾಜೀನಾಮೆ ಕೊಡಲ್ಲ, ವಾಟ್ಸಪ್ ಡೆತ್ ನೋಟ್ ಮೇಲೆ ಅನುಮಾನ’ ಹೀಗಂತ ಸಚಿವ ಈಶ್ವರಪ್ಪ ಹೇಳಲು ಕಾರಣವೇನು?

SHIVAMOGGA LIVE NEWS | SHIMOGA POLITICS | 13 ಏಪ್ರಿಲ್ 2022

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಅಮೂಲಾಗ್ರ ತನಿಖೆ ನಡೆಸಬೇಕು. ಆದರೆ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ತಾವು ನೂರಕ್ಕೆ ನೂರು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದರು.

‘ಅದನ್ನ ಡೆತ್ ನೋಟ್ ಅಂತಾರಾ?’

ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ಹಿಡಿದುಕೊಂಡು ಬಿಜೆಪಿಯವರು ಪ್ರತಿಭಟನೆ ನಡೆಸಿದ್ದರು. ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದರು ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಡಿವೈಎಸ್’ಪಿ ಗಣಪತಿ ಅವರು ಡೆತ್ ನೋಟ್ ಬರೆದಿಟ್ಟು ಸಹಿ ಹಾಕಿದ್ದರು. ಆದರೆ ಸಂತೋಷ್ ಪಾಟೀಲ್ ಪ್ರಕರಣ ಹಾಗಲ್ಲ ಎಂದರು.

Kalleshwara-Enterprises.webp

ವಾಟ್ಸಪ್’ನಲ್ಲಿ ಡೆತ್ ನೋಟ್ ಟೈಪ್ ಮಾಡಿದ್ದಾರೆ. ಆದರೆ ಅದನ್ನು ಟೈಪ್ ಮಾಡಿದ್ದು ಅವರೋ ಅಥವಾ ಬೇರೆಯವರೊ ಗೊತ್ತಿಲ್ಲ. ಅದು ತನಿಖೆಯಿಂದ ಹೊರಬರಬೇಕು. ಆದರೆ ಸಂತೋಷ್ ಪಾಟೀಲ್ ಅವರು ಡೆತ್ ನೋಟ್ ಬರೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಈಶ್ವರಪ್ಪ ಅವರು ತಿಳಿಸಿದರು.

ನಿಯಮ ಬಾಹಿರವಾಗಿ ಕಾಮಗಾರಿ

ನಮ್ಮ ಇಲಾಖೆಯಲ್ಲಿ ಯಾವುದೆ ಕಾಮಗಾರಿ ನಡೆಸುವಾಗ ಆಡಳಿತಾತ್ಮಕ ಮತ್ತು ತಾಂತ್ರಿಕವಾಗಿ ಒಪ್ಪಿಗೆ ಪಡೆಯಬೇಕು. ಆ ನಂತರ ವರ್ಕ್ ಆರ್ಡರ್ ಕೊಡಬೇಕು. ಸರ್ಕಾರಿ ಇಲಾಖೆ ಮೇಲ್ವಿಚಾರಣೆ ನಡೆಸಬೇಕು. ಆ ನಂತರ ಬಿಲ್ ಪಾವತಿ ಆಗಲಿದೆ. ಆದರೆ ಸಂತೋಷ್ ಪಾಟೀಲ್ ಅವರು ನಡೆಸಿದ್ದಾರೆ ಎನ್ನಲಾದ ಕಾಮಗಾರಿಗಳು ಕಾನೂನು ಬಾಹಿರವಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.  

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸರ್ಕಾರ ನಡೆಸಿದ್ದಾರೆ. ಅವರು ಸರ್ಕಾರ ನಡೆಸುತ್ತಿದ್ದಾಗ ಹೀಗೆ ನಿಯಮ ಬಾಹಿರವಾಗಿ ಕಾಮಗಾರಿಗಳನ್ನು ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.

ದೆಹಲಿಗೆ ಹೋಗಲು ಹಣ ಕೊಟ್ಟವರಾರು?

ಸಂತೋಷ್ ಪಾಟೀಲ್ 80 ಭಾರಿ ನಮ್ಮ ಮನೆ ಬಳಿ ಬಂದು ಹೋಗಿದ್ದೇನೆ ಎಂದಿದ್ದಾರೆ. ದೆಹಲಿಗೆ ಹೋಗಿ ನಮ್ಮ ಪಕ್ಷದ ಮುಖಂಡರನ್ನು ಭೇಟಿಯಾಗಿ ಪತ್ರ ಕೊಟ್ಟು ಬಂದಿದ್ದಾರೆ. 4 ಕೋಟಿ ರೂ. ಕೆಲಸ ಮಾಡಿದ್ದೇನೆ. ಸಚಿವ ಈಶ್ವರಪ್ಪ ಅವರ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಹಣ ಖರ್ಚಾಗಿದ್ದು ತಾವು ಬಡತನದಲ್ಲಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ದೆಹಲಿಗೆ ಹೋಗಲು ಹಣ ಕೊಟ್ಟವರು ಯಾರು ಅನ್ನುವುದು ಈಗ ಗೊತ್ತಾಗಬೇಕಿದೆ ಎಂದು ಈಶ್ವರಪ್ಪ ತಿಳಿಸಿದರು.

ಕೇಂದ್ರದಿಂದ ಕರೆ ಬಂದಿಲ್ಲ

ಘಟನೆ ಸಂಬಂಧ ಕೇಂದ್ರದ ನಾಯಕರು ಈತನಕ ಕರೆ ಮಾಡಿಲ್ಲ. ನಾಳೆ ಆಥವಾ ನಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾಹಿತಿ ನೀಡುತ್ತೇನೆ. ನಮ್ಮ ಇಲಾಖೆ ಮುಖ್ಯ ಕಾರ್ಯದರ್ಶಿ ಅತಿಕ್ ಅಹಮದ್ ಅವರು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಂತೋಷ್ ಪಾಟೀಲ್ ನಡೆಸಿದ ಕಾಮಗಾರಿಗಳ ವಿವರ ನೀಡುವಂತೆ ಕೇಳಿದ್ದಾರೆ. ಅದು ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.

Eshwarappa In Press Meet

ಕುಮಾರಸ್ವಾಮಿ ಅವರು ಕರೆ ಮಾಡಿದ್ರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕರೆ ಮಾಡಿ ಮಾತನಾಡಿದರು. ನಿಮ್ಮ ಪಕ್ಷದವರೆ ಅಥವಾ ಬೇರೆಯವರಾರೋ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಷಡ್ಯಂತ್ರ ಎಂದು ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್’ನವರು ಅರ್ಜೆಂಟ್’ನಲ್ಲಿದ್ದಾರೆ

ನನ್ನ ರಾಜೀನಾಮೆ ಪಡೆಯಲು ಕಾಂಗ್ರೆಸ್ ಮುಖಂಡರು ಅರ್ಜೆಂಟ್’ನಲ್ಲಿದ್ದಾರೆ. ಬಹಳ ಬೇಗ ಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸ್ಪರ್ಧೆಗೆ ಬಿದ್ದಿದ್ದಾರೆ. ಅದರೆ ಈ ಜನ್ಮದಲ್ಲಿ ಅವರು ಸಿಎಂ ಆಗುವುದಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.

Eshwarappa in BJP press meet

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.

shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment