SHIMOGA : ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಅಧಿಕಾರಿಗಳು, ಸಿಬ್ಬಂದಿ ಎಣಿಕೆ ಕೇಂದ್ರದತ್ತ (Counting Center) ಆಗಮಿಸುತ್ತಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂನಲ್ಲಿರುವ ಮತ ಪೆಟ್ಟಿಗೆಗಳನ್ನು ಹೊರ ತೆಗೆಯುವ ಪ್ರಕ್ರಿಯೆ ಶುರುವಾಗಿದೆ.

ಗುರುತು ಚೀಟಿ ಇದ್ದವರಷ್ಟೆ ಒಳಗೆ
ಚುನಾವಣೆ ಆಯೋಗದ ಅಧಿಕೃತ ಗುರುತು ಚೀಟಿ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರು, ಅಭ್ಯರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಹೊರತು ಮತ್ಯಾರಿಗು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಸಹ್ಯಾದ್ರಿ ಕಾಲೇಜು ಗೇಟ್ ಮುಂಭಾಗ ಪೊಲೀಸ್ ಸಿಬ್ಬಂದಿ ಗುರುತು ಚೀಟಿ ಹೊಂದಿರುವವರನ್ನು ಪರಿಶೀಲಿಸಿ ಕೇಂದ್ರದೊಳಗೆ ಬಿಡುತ್ತಿದ್ದಾರೆ.
ಅಭ್ಯರ್ಥಿಗಳಲ್ಲಿ ಹೆಚ್ಚಿದ ಕಾತುರ
ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಜೊತೆಗೆ ಈ ಬಾರಿ ಹಿರಿಯ ನಾಗರಿಕರು ಕೂಡ ಅಂಚೆ ಮತದಾನ ಮಾಡಿದ್ದಾರೆ. ಈ ಮತಗಳತ್ತ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹೆಚ್ಚು ಗಮನ ವಹಿಸುತ್ತವೆ. ಆಡಳಿತ ಯಂತ್ರ ಯಾರ ಪರ ಒಲವು ಹೊಂದಿದೆ ಅನ್ನುವುದಕ್ಕೆ ಅಂಚೆ ಮತಗಳು ಪ್ರಮುಖ ಪಾತ್ರ ವಹಿಸಲಿವೆ.

ಪಕ್ಷದ ಕಾರ್ಯಕರ್ತರು ಸಹ್ಯಾದ್ರಿ ಕಾಲೇಜು ಹೊರಭಾಗದಲ್ಲಿ ನಿಂತು ಫಲಿತಾಂಶ ಆಲಿಸಬಹುದಾಗಿದೆ. ಇದಕ್ಕಾಗಿ ಕಾಲೇಜು ಮುಂಭಾಗ ಮೈಕ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಹೊತ್ತಿಗೆಲ್ಲ ಗೆಲುವು, ಸೋಲಿನ ಅಂದಾಜು ಸಿಗುವ ಸಾಧ್ಯತೆ ಇದೆ. ಹಾಗಾಗಿ ಅಭ್ಯರ್ಥಿಗಳು, ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ ಎಣಿಕೆ, ಹೇಗಿದೆ ಸಿದ್ಧತೆ? ಎಷ್ಟು ಸುತ್ತುಗಳು ಇರುತ್ತವೆ? ಯಾರಿಗೆಲ್ಲ ಕೇಂದ್ರದೊಳಗೆ ಪ್ರವೇಶವಿದೆ?