SHIVAMOGGA LIVE NEWS | 27 FEBRUARY 2024
SHIMOGA : ಲೋಕಸಭೆ ಚುನಾವಣೆಯ ಕಾವು ಏರುತ್ತಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುವುದು ನಿಶ್ಚಿತ. ಈ ಹಿನ್ನೆಲೆ ಪ್ರಚಾರ ಕಾರ್ಯವು ಆರಂಭವಾಗಿದೆ. ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಇನ್ನು ನಿಗದಿಯಾಗಿಲ್ಲ. ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಕುತೂಹಲ ಮೂಡಿಸಲಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದಲ್ಲಿ ಸೊರಬ ಮತ್ತು ಭದ್ರಾವತಿ ಹೊರತು ಉಳಿದೆಲ್ಲೆಡೆ ಒಬ್ಬರಿಗಿಂತಲು ಹೆಚ್ಚು ಆಕಾಂಕ್ಷಿಗಳಿದ್ದರು. ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್ನಲ್ಲಿ ಪರಿಸ್ಥಿತಿ ಬದಲಾಗಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳೆ ಇಲ್ಲವಾಗಿದ್ದಾರೆ. ಈವರೆಗೂ ಟಿಕೆಟ್ಗಾಗಿ ಪೈಪೋಟಿ ನಡೆಸಿದವರು ಈಗ ‘ಪಕ್ಷ ಸೂಚಿಸಿದವರ ಪರ ಕೆಲಸ ಮಾಡಲು ಸಿದ್ಧʼ ಎಂದು ತಿಳಿಸುತ್ತಿದ್ದಾರೆ.
ಯಾರೆಲ್ಲರ ಹೆಸರು ಚಾಲ್ತಿಯಲ್ಲಿದೆ?
ಕೆಲವು ತಿಂಗಳ ಹಿಂದೆ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಗೀತಾ ಶಿವರಾಜ್ಕುಮಾರ್ ಅವರ ಹೆಸರು ಚಾಲ್ತಿಯಲ್ಲಿದ್ದವು. ಬದಲಾದ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿದ್ದಾರೆ. ಸುಂದರೇಶ್ ಅವರು, ‘ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷವು ಸರ್ವೆ ನಡೆಸುತ್ತಿದೆ. ಯಾರಿಗೆ ಟಿಕೆಟ್ ನೀಡಿದರೂ ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಗೀತಾ ಶಿವರಾಜ್ಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪ ಅವರ ಹೆಸರು ಮುನ್ನಲೆಯಲ್ಲಿದೆ. 2014ರಲ್ಲಿ ಜೆಡಿಎಸ್ ಪಕ್ಷದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಶಿವರಾಜ್ಕುಮಾರ್ ಅವರು 2.40 ಲಕ್ಷ ಮತ ಪಡೆದಿದ್ದರು. ಈ ಬಾರಿ ಅವರನ್ನೆ ಕಣಕ್ಕಿಳಿಸಿದರೆ ಸೂಕ್ತ ಎಂಬ ಲೆಕ್ಕಾಚಾರವಿದೆ.
ಮತ್ತೊಂದೆಡೆ ಸಚಿವ ಮಧು ಬಂಗಾರಪ್ಪ ಅವರನ್ನೆ ಕಣಕ್ಕಿಳಿಸಬೇಕು ಎಂಬ ವಾದವು ಇದೆ. 2018ರ ಲೋಕಸಭೆ ಉಪ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ದೊಡ್ಡ ಮೊತ್ತದ ಮತಗಳನ್ನು ಪಡೆದಿದ್ದರು. ಬಿಜೆಪಿಯ ಬಿ.ವೈ.ರಾಘವೇಂದ್ರ ಅವರಿಗೆ ಪೈಪೋಟಿ ಒಡ್ಡಿದ್ದರು. ಈ ಹಿನ್ನೆಲೆ ಈ ಬಾರಿಯು ಮಧು ಬಂಗಾರಪ್ಪ ಅವರನ್ನೆ ಕಣಕ್ಕಿಳಿಸಬೇಕು ಎಂಬ ಚರ್ಚೆ ಇದೆ.
ಯಾರಾಗ್ತಾರೆ ಅಚ್ಚರಿ ಅಭ್ಯರ್ಥಿ?
ಕಾಂಗ್ರೆಸ್ ಪಕ್ಷದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಕುತೂಹಲ ಮೂಡಿಸಲಾಗಿದೆ. ಈತನಕ ಅಭ್ಯರ್ಥಿ ಕುರಿತು ಪಕ್ಷ ಸುಳಿವು ನೀಡಿಲ್ಲ. ಮುಖಂಡರಿಗು ಇದೇ ಕುತೂಹಲವಿದೆ. ಸದ್ಯ ಗ್ಯಾರಂಟಿ ಯೋಜನೆಗಳು ಮನೆ ಮನೆಗು ತಲುಪಿರುವುದನ್ನೆ ಮುನ್ನಲೆಯಲ್ಲಿಟ್ಟುಕೊಂಡು ಪ್ರಚಾರ ನಡೆಸಲಾಗುತ್ತಿದೆ.
ಇದನ್ನೂ ಓದಿ – ನಟ ದರ್ಶನ್ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯರಿಂದ ದೂರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200