ಶಿವಮೊಗ್ಗ: ಬಿಹಾರ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ, ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಫಲಿತಾಂಶ ಮತ್ತು ಗೆಲುವಿನ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಯಡಿಯೂರಪ್ಪ ಏನಂದ್ರು?
ವಿನೋಬನಗರದ ತಮ್ಮ ಮನೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟು ದೊಡ್ಡ ಮಟ್ಟಿಗೆ ಸ್ಥಾನಗಳನ್ನು ಗಳಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ. ಎನ್ಡಿಎ 190ಕ್ಕಿಂತಲು ಹೆಚ್ಚು ಸ್ಥಾನ ಗೆಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರ ನೇತೃತ್ವದ, ನಿತೀಶ್ ಕುಮಾರ್ ಅವರ ನಾಯತ್ವವನ್ನು ಜನರು ಮಚ್ಚಿದ್ದಾರೆ’ ಎಂದರು.
‘ಮತಗಳ್ಳತನದಿಂದ ಗೆಲ್ಲುತ್ತಿದ್ದವರಿಗೆ ಸೋಲಾಗಿದೆʼ
ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿ, ‘ಇಡೀ ದೇಶದ ಜನ ಮತ್ತೊಮ್ಮೆ ಎನ್ಡಿಎ ಪರಿವಾಗಿ ಆಶೀರ್ವಾದ ಮಾಡುತ್ತಿದ್ದಾರೆ ಎಂಬುದಕ್ಕೆ ಬಿಹಾರದ ಫಲಿತಾಂಶವೇ ಸಾಕ್ಷಿ. ನಿರೀಕ್ಷೆ ಮೀರಿದ ಫಲಿತಾಂಶ ಲಭಿಸಿದೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲು, ಗೆಲುವಿನ ಮಧ್ಯೆ ಸಿಲುಕಿದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಗಳಲ್ಲಿಯು ಬಿಜೆಪಿ, ನಿತೀಶ್ ಕುಮಾರ್ ಮತ್ತು ಎನ್ಡಿಎ ಪರವಾಗಿ ಜನ ಒಲವು ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಗೆ ಬಿಹಾರದ ಜನರು ಬೆಂಬಲ ನೀಡಿದ್ದಾರೆʼ ಎಂದರು.
ಇದನ್ನೂ ಓದಿ » ಶಿವಮೊಗ್ಗದ ಒಂದು ರೈಲ್ವೆ ನಿಲ್ದಾಣ ಸೇರಿ ರಾಜ್ಯದ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರು
‘ಇಷ್ಟು ವರ್ಷ ಕಾಂಗ್ರೆಸ್ನವರು ದೇಶದಲ್ಲಿ, ರಾಜ್ಯಗಳಲ್ಲಿ ಅಡಳಿತ ಮಾಡುತ್ತ ಬಂದಿದ್ದು ಮತಗಳ್ಳತನದಿಂದ ಎಂಬುದು ಸಾಬೀತಾಗಿದೆ. ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಿದಾಗ ಸುಮಾರು 40 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಯಿತು. ಕ್ಷೇತ್ರವಾರು ವಿಂಗಡಿಸಿದಾಗ ಪ್ರತಿ ಕ್ಷೇತ್ರಕ್ಕೆ ಎರಡರಿಂದ ಮೂರು ಸಾವಿರ ಮತಗಳಾಗುತ್ತವೆ. ಹೀಗೆ ಮತಗಳ್ಳತನದಿಂದಲೇ ಇವರು ಗೆದ್ದು ಬರುತ್ತಿದ್ದರು ಎಂದೆನಿಸುತ್ತದೆ. ಪಶ್ಚಿಮ ಬಂಗಾಳ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೇವೆʼ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.








