SHIVAMOGGA LIVE NEWS | 10 JANUARY 2024
SHIMOGA : ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಗಣ್ಯರು ಸಂಚರಿಸುವ ರಸ್ತೆಗಳು ಗುಂಡಿ ಮುಕ್ತವಾಗುತ್ತಿವೆ. ಕಸ ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ.
ಜ.12ರಂದು ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಅಧಿಕಾರಿಗಳು ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಅವರು ಫ್ರೀಡಂ ಪಾರ್ಕ್ ತಲುಪುವ ಮಾರ್ಗದಲ್ಲಿದ್ದ ಗುಂಡಿಗಳನ್ನು ಅಧಿಕಾರಿಗಳು ಬಂದ್ ಮಾಡಿಸುತ್ತಿದ್ದಾರೆ.
ಹೊಳೆ ಸ್ಟಾಪ್ ಬಳಿ ಗುಂಡಿ ಬಂದ್
ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಸಮೀಪ ಎನ್ಸಿಸಿ ಕಚೇರಿ ಎದುರು ದೊಡ್ಡ ಗುಂಡಿಗಳಾಗಿದ್ದವು. ಈ ಕುರಿತು ಸಾರ್ವಜನಿಕರು, ವಿವಿಧ ಸಂಘಟನೆಗಳು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಗುಂಡಿಗಳನ್ನು ಬಂದ್ ಮಾಡಿರಲಿಲ್ಲ. ಈಗ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನೆಲೆ ಗುಂಡಿಗಳೆಲ್ಲ ಮಾಯವಾಗುತ್ತಿವೆ. ಡಾಂಬಾರ್ ಹಾಕಿ, ರೋಲರ್ ಹತ್ತಿಸಿ ಗುಂಡಿ ಮುಕ್ತಗೊಳಿಸಲಾಗಿತ್ತಿದೆ.
ರಸ್ತೆ, ಫುಟ್ ಪಾತ್ ಕ್ಲೀನ್
ಇನ್ನು, ರಸ್ತೆ, ಫುಟ್ ಪಾತ್ಗಳ ಸ್ವಚ್ಛತಾ ಕಾರ್ಯವು ಬಿರುಸಾಗಿ ನಡೆಯುತ್ತಿದೆ. ಗಣ್ಯರು ಸಾಗುವ ಮಾರ್ಗದಲ್ಲಿ ರಸ್ತೆಯ ಅಕ್ಕಪಕ್ಕ ಇದ್ದ ಮಣ್ಣು ತೆರವು ಮಾಡಲಾಗುತ್ತಿದೆ. ಫುಟ್ ಪಾತ್ ಮೇಲಿದ್ದ ಕಸ ತೆಗೆದು ಕ್ಲೀನ್ ಮಾಡಲಾಗುತ್ತಿದೆ. ಮುಖ್ಯಮಂತ್ರಿ, ಗಣ್ಯರು ಸಾಗುವ ಮಾರ್ಗ ಅಕ್ಷರಶಃ ಸ್ವಚ್ಛ ಶಿವಮೊಗ್ಗವಾಗಿ ಕಂಗೊಳಿಸುತ್ತಿದೆ.
ನಾಗರಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾಗ ಗುಂಡಿಗಳನ್ನು ಮುಚ್ಚದ ಆಡಳಿತ ಸಿಎಂ ಭೇಟಿ ಹಿನ್ನೆಲೆ ಕಾರ್ಯಪ್ರವೃತ್ತವಾಗಿದೆ. ಸಿಎಂ, ಸಚಿವರು, ಹಿರಿಯ ಅಧಿಕಾರಿಗಳು ಆಗಿಂದಾಗ ಶಿವಮೊಗ್ಗಕ್ಕೆ ಭೇಟಿ ನೀಡಿದರೆ ನಗರದ ಪ್ರಮುಖ ರಸ್ತೆಗಳು ಗುಂಡಿ ಮುಕ್ತವಾಗಿರುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಇದನ್ನೂ ಓದಿ – ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರು ಬಂಧನ, ಎರಡು ಗಿಳಿಗಳು ವಶಕ್ಕೆ