SHIVAMOGGA LIVE NEWS | PRICE RAISE | 31 ಮೇ 2022
ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ (ಎಂ) ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಎಡಪಕ್ಷಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್, ಹಣ್ಣು, ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರ, ಮಧ್ಯಮ ವರ್ಗದವರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಸರ್ಕಾರವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವುದರ ಮೂಲಕ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಜತೆಯಲ್ಲೇ ಅಡುಗೆ ಅನಿಲದ ಬೆಲೆಯನ್ನೂ ತೀವ್ರವಾಗಿ ಹೆಚ್ಚಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ 72 ರೂ. ಆಸುಪಾಸಿನಲ್ಲಿತ್ತು. ಆಗ ಅಂತರಾಷ್ಟ್ರೀಯ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್ಲಿಗೆ 110 ಡಾಲರ್ ನಷ್ಟಿತ್ತು. ಈಗ ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಅರ್ಧದಷ್ಟು ಇಳಿದಿದೆ ಎಂದರು.
2014ರ ತೈಲ ಬೆಲೆಗೆ ಹೋಲಿಸಿದರೆ ಈಗ ಅದು ಸರಿ ಸುಮಾರು ಅರ್ಧಕ್ಕೆ ಇಳಿಯಬೇಕಾಗಿತ್ತು. ಅಂದರೆ ಪೆಟ್ರೋಲ್ ಬೆಲೆ 36 ರೂ. ಇರಬೇಕಿತ್ತು. ಆದರೆ ಅದು 110 ರೂ. ದಾಟಿ ವೇಗದಿಂದ ಧಾವಿಸುತ್ತಲೇ ಇದೆ. ಹೆಚ್ಚುವರಿ ವಸೂಲಾಗುತ್ತಿರುವ ಹಣ ಎಲ್ಲಿಗೆ ಹೋಯಿತು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಅಬಕಾರಿ ಸುಂಕಗಳಲ್ಲಿನ ಈ ಹೆಚ್ಚಳವು ಕಾರ್ಪೋರೇಟ್ಗಳು ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಒದಗಿಸಿರುವ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರದ ಆದಾಯಕ್ಕೆ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲಿಕ್ಕಾಗಿ ಎಂಬುದು ಸ್ಪಷ್ಟ. ಕಾರ್ಪೋರೇಟ್ ಮತ್ತು ಆದಾಯ ತೆರಿಗೆ ಆದಾಯದಲ್ಲಿ ಕಳೆದ ವರ್ಷ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಂ.ನಾರಾಯಣ, ತುಳಸಿ ಪ್ರಭಾ, ಶಿವಣ್ಣ, ಮುನಿರಾಜು, ಪ್ರಭಾಕರ್, ಕೆ.ಎಲ್.ರಾವ್, ಜಾರ್ಜ್ಸಿಲ್ಡಾನ್ ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರೈತ ಸಂಘದ ತುರ್ತು ಸಭೆ, ರಾಜ್ಯಾಧ್ಯಕ್ಷರ ವಜಾ, ಹೊಸ ಅಧ್ಯಕ್ಷರ ನೇಮಕ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.