SHIVAMOGGA LIVE NEWS | 18 APRIL 2024
RAIN REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಜೋರು ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿರುವ ವರದಿಯಾಗಿದೆ. ತೀರ್ಥಹಳ್ಳಿಯಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲೆಲ್ಲಿ ಏನೇನು ಹಾನಿಯಾಗಿದೆ?
ತೀರ್ಥಹಳ್ಳಿ : ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಜೋರು ಗಾಳಿಗೆ ಕೋಣಂದೂರು ಸಮೀಪದ ದೇಮ್ಲಾಪುರದಲ್ಲಿ ಮರ ಬಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೋಣಂದೂರಿನಿಂದ ಸಂಪಗಾರಿಗೆ ತೆರಳುತ್ತಿದ್ದ ಜಯಂತ್ ಭಟ್ (64) ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇನ್ನು, ಆಗುಂಬೆಯ 3ನೇ ತಿರುವಿನಲ್ಲಿ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದರು.
ಆನಂದಪುರ : ಗಾಳಿ, ಗುಡುಗು ಸಹಿತ ಜೋರು ಮಳೆಯಾಗಿದೆ. ಮುಂಬಾಳು ಗ್ರಾಮದ ಸಮೀಪ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು ಒಂದು ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಸಾಗರ : ತಾಲೂಕಿನ ಹಲವು ಕಡೆ ಮಳೆಯಾಗಿದೆ. ಜೋರು ಮಳೆಯಾಗಿದ್ದರಿಂದ ಸಾಗರ ಪಟ್ಟಣದ ಎಸ್ಪಿಎಂ ರಸ್ತೆಯಲ್ಲಿ ನೀರು ನಿಂತಿತ್ತು. ಜೋರು ಮಳೆಯಿಂದಾಗಿ ಸಾಗರದಲ್ಲಿ ತಂಪು ತಂಪು ವಾತಾವರಣ ನಿರ್ಮಾಣವಾಗಿದೆ.
ಕುಂಸಿ : ಸುತ್ತಮುತ್ತ ಜೋರು ಮಳೆಯಾಗಿದೆ. ರೇಚಿಕೊಪ್ಪ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಉರುಳಿದೆ. ವಿದ್ಯತ್ ತಂತಿ ತುಂಡಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇನ್ನು, ಶಿವಮೊಗ್ಗ ತಾಲೂಕು ಆಯನೂರು, ಕುಂಸಿ ಸುತ್ತಮುತ್ತ ಜೋರು ಮಳೆಯಾಗಿದೆ.
ಶಿವಮೊಗ್ಗ : ನಗರದಲ್ಲಿ ಸಂಜೆ ವೇಳೆಗೆ ದಟ್ಟ ಮೋಡ ಆವರಿಸಿತ್ತು. ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇತ್ತು. ಆದರೆ ವಿಪರೀತ ಗಾಳಿಯಿಂದಾಗಿ ಮಳೆಯಾಗಲಿಲ್ಲ. ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತ