SHIVAMOGGA LIVE NEWS | 22 APRIL 2024
SHIMOGA : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ನಿಶ್ಚಿತ. ಇದಕ್ಕೆ ಪೂರಕವಾಗಿ ಭೂ ದೃಶ್ಯಾವಳಿ ಸರ್ವೆ ಕಾರ್ಯ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ವರದಿ ವಿರುದ್ಧ ಧ್ವನಿ ಎತ್ತಿದ್ದರೆ ತೋರಿಸಲಿ ಎಂದು ಕೆಪಿಸಿಸಿ ವಕ್ತಾರ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಹೆಗ್ಡೆ, ಕಸ್ತೂರಿ ರಂಗನ್ ವರದಿಯಿಂದ 10 ಜಿಲ್ಲೆಗಳ 1572 ಗ್ರಾಮಗಳು ಸಂಕಷ್ಟಕ್ಕೀಡಾಗುತ್ತವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 475 ಗ್ರಾಮಗಳು ಸೇರಿವೆ. ಕೇಂದ್ರ ಸರ್ಕಾರ ವರದಿ ಜಾರಿಗೊಳಿಸುವುದಾಗಿ ಹಸಿರು ಪೀಠಕ್ಕೆ ಅಫಿಡವಿಟ್ ಸಲ್ಲಿಸಿದೆ. ಈ ಹಿನ್ನೆಲೆ ಹಸಿರು ಪೀಠವು ಭೂ ದೃಶ್ಯಾವಳಿ ಸರ್ವೆ ನಡೆಸುವಂತೆ ಕೇಂದ್ರ ಅರಣ್ಯ ಇಲಾಖೆಗೆ ಸೂಚಿಸಿದೆ. ಹಾಗಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಗ್ಯಾರಂಟಿ. ಇದುವೆ ಮೋದಿ ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಹಾಜರಾಗದ ಯಡಿಯೂರಪ್ಪ
2015 ಮತ್ತು 2016ರಲ್ಲಿ ಕೇಂದ್ರದ ಅರಣ್ಯ ಇಲಾಖೆ ಸಚಿವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಸಂಸದರ ಸಭೆ ಕರೆಯಲಾಗಿತ್ತು. ಆಗ ಶಿವಮೊಗ್ಗದ ಸಂಸದರಾಗಿದ್ದ ಯಡಿಯೂರಪ್ಪ ಎರಡೂ ಸಭೆಗೆ ಗೈರಾಗಿದ್ದರು. ಯಡಿಯೂರಪ್ಪ ಸಭೆಗೆ ಹಾಜರಾಗಿ ಅಭಿಪ್ರಾಯ ಮಂಡಿಸಿದ್ದರೆ ಪರಿಣಾಮಕಾರಿ ಆಗಿರುತ್ತಿತ್ತು ಎಂದು ತಿಳಿಸಿದರು.
ರಾಘವೇಂದ್ರ ಚರ್ಚಿಸಿಲ್ಲ, ಪತ್ರ ಬರೆದಿಲ್ಲ
ಕಸ್ತೂರಿ ರಂಗನ್ ವರದಿ ಕೈ ಬಿಡಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಆದರೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಭೌತಿಕ ಭೂ ದೃಶ್ಯಾವಳಿ ಸರ್ವೆ ನಡೆಸಲು ಒಂದು ವರ್ಷ ಗಡುವು ನೀಡಿದ್ದಾರೆ. ಹಾಗಿದ್ದೂ ಸಂಸದ ರಾಘವೇಂದ್ರ ಕಸ್ತೂರಿ ರಂಗನ್ ವರದಿ ಕುರಿತು ಸಂಸತ್ತಿನಲ್ಲಿ ಚರ್ಚಿಸಿಲ್ಲ. ಒಮ್ಮೆಯಾದರೂ ಪ್ರಧಾನಿಗೆ ಈ ಕುರಿತು ಪತ್ರ ಬರೆದಿದ್ದಾರೆ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಕಾಯ್ದೆಗಳಿವೆ. ಹಾಗಿದ್ದೂ ಕಸ್ತೂರಿ ರಂಗನ್ ವರಿದ ಜಾರಿಗೊಳಿಸುವ ಅನಿವಾರ್ಯತೆ ಏನು. ಮೂಲ ನಿವಾಸಿಗಳ ಜೀವನ, ಮಾನವ, ವನ್ಯ ಜೀವಿ ಸಂಘರ್ಷ ಕುರಿತು ಸರ್ಕಾರ ಚಿಂತಿಸುತ್ತಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜನರ ಬುದುಕು ದುಸ್ಥರವಾಗಲಿದೆ ಎಂದು ರಮೇಶ್ ಹೆಗ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ, ಶಿ.ಜು.ಪಾಶಾ, ಪದ್ಮನಾಭ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಕರ್ನಾಟಕಕ್ಕೆ ಮೋದಿ ಚೊಂಬು, ಲೇವಡಿ ಮಾಡಿದ್ದ ಮೋದಿಯಿಂದಲೇ ಈಗ ಗ್ಯಾರಂಟಿ ಪದ ಬಳಕೆ’