SHIVAMOGGA LIVE NEWS | 17 APRIL 2024
BHADRAVATHI : ಯುವತಿಯೊಬ್ಬಳನ್ನು ಕಾಡಿನೊಳಗೆ ಎಳೆದೊಯ್ದು ಕೊರಳಲ್ಲಿದ್ದ ಬಂಗಾರದ ಚೈನ್ ಕಸಿದುಕೊಳ್ಳಲಾಗಿದೆ. ಆಕೆಯ ರಕ್ಷಣೆಗೆ ಧಾವಿಸಿದ ಸ್ನೇಹಿತನಿಗು ಹೊಡೆದು ಮೊಬೈಲ್ ಫೋನ್, ಹಣ ಕಸಿಯಲಾಗಿದೆ. ಶಿವಮೊಗ್ಗ ತಾಲೂಕು ಜಾವಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಸುಬ್ಬಯ್ಯ ಮೆಡಿಕಲ್ ಕಾಲೇಜಿನಿಂದ ಯುವತಿಯೊಬ್ಬಳು (ಹೆಸರು ಗೌಪ್ಯ) ಕೆಲಸದ ನಿಮಿತ್ತ ಸ್ನೇಹಿತನೊಂದಿಗೆ ಬೈಕ್ನಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದಳು. ಮೂತ್ರ ವಿಸರ್ಜನೆಗೆಂದು ಜಾವಳ್ಳಿಯಲ್ಲಿ ಬೈಕ್ ನಿಲ್ಲಿಸಿದ್ದರು. ಯುವತಿ ನೀಲಗಿರಿ ಪ್ಲಾಂಟೇಶನ್ ಒಳಗೆ ಹೋಗಿದ್ದು, ಸ್ನೇಹಿತ ಬೈಕ್ ನಿಲ್ಲಿಸಿಕೊಂಡು ರಸ್ತೆ ಬದಿ ನಿಂತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೀಲಗಿರಿ ಪ್ಲಾಂಟೇಶನ್ನಲ್ಲಿ ಆರು ಮಂದಿ ಯುವಕರು ಯುವತಿಯನ್ನು ಹಿಡಿದು ಕಾಡಿನೊಳಗೆ ಎಳೆದೊಯ್ದು ಕತ್ತಿನಲ್ಲಿದ್ದ 20 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ರಕ್ಷಣೆಗೆ ಧಾವಿಸಿದ ಆಕೆಯ ಸ್ನೇಹಿತನ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ಮತ್ತು 3 ಸಾವಿರ ರೂ. ನಗದು ಕಸಿದುಕೊಂಡಿದ್ದಾರೆ. ಪಕ್ಕದ ತೋಟದಲ್ಲಿದ್ದ ವ್ಯಕ್ತಿಯನ್ನು ಗಮನಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗೊಂದಿ ಡ್ಯಾಂ, ಅಪಾಯಕಾರಿ ಜಾಗದಲ್ಲಿ ಪ್ರವಾಸಿಗರ ಈಜು, ಪೊಲೀಸರನ್ನು ಕರೆಸಿದ ಸ್ಥಳೀಯರು